ನವದೆಹಲಿ: ಪದ್ಮ ಪುರಸ್ಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಜೊತೆ ಬಿದರಿ ಕಲೆಯ ಕಲಾವಿದ ಬೀದರ್ನ ಶಾ ರಶೀದ್ ಅಹ್ಮದ್ ಖಾದ್ರಿಯವರು (Shah Rasheed Ahmed Quadri) ಆಡಿದ್ದ ಮಾತುಗಳು ಇದೀಗ ರಾಜಕೀಯ ಸ್ವರೂಪ ಪಡೆದಿವೆ.
ಪದ್ಮಶ್ರೀ ಪ್ರಶಸ್ತಿ ಪಡೆದ ರಶೀದ್ ಅಹ್ಮದ್ ಖಾದ್ರಿ ಮತ್ತು ಮೋದಿಯ ಮಾತುಕತೆ ಮೊದಲೇ ನಿರ್ಧಾರವಾಗಿತ್ತು. ಖಾದ್ರಿಯವರಿಗೆ ಮೊದಲೇ ಹೇಳಿಕೊಟ್ಟು ಇಂತಹ ಹೇಳಿಕೆ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ (Congress) ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ (Pramod Tiwari) ಆರೋಪ ಮಾಡಿದ್ದಾರೆ.
ಈ ಆರೋಪಕ್ಕೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪದ್ಮಶ್ರೀ ಖಾದ್ರಿಯವರು ಕಾಂಗ್ರೆಸ್ ನಾಯಕರ ಆರೋಪಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅವರಿಗೆ ಇಂತಹ ಮಾತು ಹೇಳಲು ನಾಚಿಕೆ ಆಗಬೇಕು. ಅವರು ಸುಳ್ಳು ಹೇಳುತ್ತಿದ್ದಾರೆ. ನಾನು ಮೋದಿ ಬಳಿ ಹೇಳಿರುವುದು ನನ್ನ ಮನದಾಳದ ಮಾತು ಎಂದು ಸ್ಪಷ್ಟಪಡಿಸಿದ್ದಾರೆ.
ರಶೀದ್ ಅಹ್ಮದ್ ಖಾದ್ರಿ ಹೇಳಿದ್ದೇನು?
ಬಿಜೆಪಿ ಸರ್ಕಾರ (BJP Government) ಮುಸ್ಲಿಮರಿಗೆ ಪ್ರಶಸ್ತಿ ನೀಡುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನನ್ನ ಊಹೆಯನ್ನು ನೀವು ಸುಳ್ಳು ಮಾಡಿದ್ದೀರಿ ಎಂದು ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದ (Karnataka) ಖ್ಯಾತ ಬಿದರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೇಳಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಎಂದಿಗೂ ಉದ್ಧಾರವಾಗದು: ಗುಲಾಂ ನಬಿ ಆಜಾದ್
ನಾನು ಯುಪಿಎ ಸರ್ಕಾರದ (UPA Government) ಅವಧಿಯಲ್ಲಿ ಪದ್ಮ ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆ. ಆದರೆ ನನಗೆ ಅದು ಸಿಗಲಿಲ್ಲ. ನಿಮ್ಮ ಬಿಜೆಪಿ ಸರ್ಕಾರ ಬಂದಾಗ ನನಗೆ ಯಾವುದೇ ಪ್ರಶಸ್ತಿ ಸಿಗುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನೀವು ನನ್ನ ಊಹೆ ತಪ್ಪು ಎಂದು ಸಾಬೀತುಪಡಿಸಿದ್ದೀರಿ. ನಿಮಗೆ ನಾನು ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದರು.