ಮಂಡ್ಯ: ಡೆಂಗ್ಯೂ ಜ್ವರಕ್ಕೆ ಏಳು ವರ್ಷದ ಶಾಲಾ ಬಾಲಕಿ ಮೃತಪಟ್ಟಿದ್ದು, ಆಕೆಯ ತಂಗಿ ಕೂಡ ಡೆಂಗ್ಯೂ ಜ್ವರದಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರವಿಕುಮಾರ್, ರಾಣಿ ದಂಪತಿಗಳ ಪುತ್ರಿ ಹೇಮಾವತಿ ಮೃತ ದುರ್ದೈವಿ. ಕೆ.ಆರ್ ಪೇಟೆ ಪಟ್ಟಣದ ಪ್ರಿಯದರ್ಶಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಾವತಿ(7) ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ರೆ, ಆಕೆಯ 5 ವರ್ಷದ ತಂಗಿ ಪ್ರೇರಣ ಕೂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹೇಮಾವತಿ ಮತ್ತು ಪ್ರೇರಣಾ ಸಹೋದರಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಹೇಮಾವತಿ ನಿಧನರಾದರೆ, ಈಕೆಯ ಸಹೋದರಿ ತೀವ್ರವಾಗಿ ಅಸ್ವಸ್ಥರಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಈ ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಅಗಸರಹಳ್ಳಿ ಗ್ರಾಮದಲ್ಲಿ ಆತಂಕವು ಮನೆ ಮಾಡಿದೆ.