ಕೊಪ್ಪಳ: ನಗರದ ಮಧ್ಯಭಾಗದಲ್ಲಿದ್ದ ಐತಿಹಾಸಿಕ ಕಮಾನುಗಳನ್ನು ಕದ್ದುಮುಚ್ಚಿ ಸಾರ್ವಜನಿಕರ ವಿರೋಧದ ನಡುವೆಯೂ ತೆರವು ಮಾಡಲಾಗಿದೆ.
ನಗರ ಸಭೆಯ ಅಧಿಕಾರಿಗಳು ಸಾರ್ವಜನಿಕರ ವಿರೋಧಕ್ಕೆ ಹೆದರಿ ಮಧ್ಯರಾತ್ರಿ 2 ಗಂಟೆಗೆ ಕಮಾನುಗಳನ್ನು ಕೆಡವಿದ್ದಾರೆ. ಹಿಂದೆಯೂ ಈ ಕಮಾನುಗಳನ್ನು ಕೆಡವಲು ಮುಂದಾಗಿದ್ದ ಅಧಿಕಾರಿಗಳು ಜನರ ವಿರೋಧಕ್ಕೆ ಹೆದರಿ ಕೈ ಬಿಟ್ಟಿದ್ದರು.
ಆದರೆ ಕಳೆದ ರಾತ್ರಿ ಯಾರಿಗೂ ತಿಳಿಯದಂತೆ ಕಮಾನು ಕೆಡವಿ ಹಾಕಿದ ಅಧಿಕಾರಿಗಳು ಈಗ ನಮಗೇನೂ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೊಪ್ಪಳದ ಕಮಾನು ಉಳಿಸಿ ಹೋರಾಟ ಸಮಿತಿಯವರು ಪ್ರಾಚ್ಯವಸ್ತು ಇಲಾಖೆಗೆ ಕಮಾನು ಕೆಡವದಂತೆ ಮನವಿ ಮಾಡಿದ್ದರು.
ಕೊಪ್ಪಳ ನಗರದ ಜವಹಾರ ರಸ್ತೆ ಮತ್ತು ಕೋಟೆ ರಸ್ತೆಯಲ್ಲಿರುವ ಎರಡು ಕಮಾನುಗಳನ್ನು ರಾತ್ರೋರಾತ್ರಿ ತೆರವು ಗೊಳಿಸಿರುವುದು ಸಾರ್ವಜನಿಕರನ್ನು ಕೆರಳಿಸಿದೆ. ಅಧಿಕಾರಿಗಳ ಬೇಜವಾಬ್ದಾರಿಯುತ ನಡೆಯೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.