ರಾಯಚೂರು: ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ (AIIMS Hospital) ಒತ್ತಾಯಿಸಿ ನಡೆದಿರುವ ಹೋರಾಟ 150 ದಿನಗಳನ್ನು ದಾಟಿದ್ದರೂ, ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ದೇವದುರ್ಗದ ಅರಕೇರಾದಲ್ಲಿನ ಶಾಸಕ ಶಿವನಗೌಡ ನಾಯಕ್ (Shivanagouda Naik) ನಿವಾಸಕ್ಕೆ ಹೋರಾಟಗಾರರು ಮುತ್ತಿಗೆ ಹಾಕಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿದರು.
ರಾಯಚೂರಿನಿಂದ ಅರಕೇರಾವರೆಗೆ 51 ಕಿ.ಮೀ ಪಾದಯಾತ್ರೆ ಮೂಲಕ ಬಂದ ಹೋರಾಟಗಾರರು ವಚನ ಭ್ರಷ್ಟರಾದ ಶಾಸಕ ಶಿವನಗೌಡ ನಾಯಕ್ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳಬೇಕು. ಏಮ್ಸ್ ಸ್ಥಾಪನೆ ಕುರಿತು ಸರ್ಕಾರದಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಶಿವನಗೌಡ ನಾಯಕ್ ಮಾತನಾಡಿ, ಏಮ್ಸ್ ಆಸ್ಪತ್ರೆ ಸ್ಥಾಪನೆಗೆ ಒಂದು ಲಕ್ಷ ಕೋಟಿ ರೂ. ಅನುದಾನದ ಬೇಕಾಗುತ್ತದೆ. ರಾಯಚೂರಿಗೆ ಆ ರೀತಿಯ ಸಂಸ್ಥೆ ಬಂದರೆ ನನಗೂ ಖುಷಿಯಾಗುತ್ತದೆ, ಈ ಹಿನ್ನೆಲೆಯಲ್ಲಿ ಹೋರಾಟಗಾರರ ಆಕ್ರೋಶಕ್ಕೆ ಮಣಿದು ಸರ್ಕಾರದ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದ ಕಾಶ್ಮೀರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾಹನ ಸಂಚಾರ ಸ್ಥಗಿತ
ಅರಕೇರಾ ಗ್ರಾಮ ವಾಸ್ತವ್ಯದಲ್ಲಿದ್ದ ಕಂದಾಯ ಸಚಿವ ಆರ್. ಅಶೋಕ್ಗೂ (R Ashok) ಹೋರಾಟಗಾರರ ಪ್ರತಿಭಟನೆ ಬಿಸಿ ತಟ್ಟಿತು. ಸಚಿವರಿಗೆ ಮನವಿ ಸಲ್ಲಿಸಿದ ಹೋರಾಟಗಾರರು ಹಿಂದುಳಿದ ಭಾಗಕ್ಕೆ ಅನ್ಯಾಯ ಮಾಡಬೇಡಿ ಅಂತ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಆರ್. ಅಶೋಕ್ ನಿಮ್ಮ ಹೋರಾಟಕ್ಕೆ ಧ್ವನಿಯಾಗಿ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಹಾಸನದಲ್ಲಿ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ