ನವದೆಹಲಿ: ವಿದ್ಯುತ್ ಬಿಲ್ ಜಾಸ್ತಿ ಬಂದ ಕಾರಣಕ್ಕೆ ಮಾವ-ಸೊಸೆ ನಡುವೆ ಜಗಳ ನಡೆದು, ಸಿಟ್ಟಿಗೆದ್ದ ಮಾವ ಚಾಕುವಿನಿಂದ ಸೊಸೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ದೆಹಲಿಯ ಪಹರ್ಗಾಂಜ್ ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ನೀರಜಾ ದೇವಿ(33) ಹಾಗೂ ಆರೋಪಿಯನ್ನು ಭಾಗತ್ ರಾಮ್(65) ಎಂದು ಗುರುತಿಸಲಾಗಿದೆ. ಮನೆಗೆ ವಿದ್ಯುತ್ ಬಿಲ್ ಜಾಸ್ತಿ ಬಂದ ಕಾರಣ ಸೊಸೆ ನೀರಜಾ ಅಡುಗೆ ಮನೆಯ ಬಲ್ಬ್ ತೆಗೆದಿದ್ದಾಳೆ. ಈ ಕಾರಣಕ್ಕೆ ನೀರಜಾ ಮತ್ತು ಆಕೆಯ ಅತ್ತೆ-ಮಾವನ ನಡುವೆ ಜಗಳ ನಡೆದಿತ್ತು. ಬಳಿಕ ಅದು ತಾರಕಕ್ಕೇರಿ ಮಾತಿಗೆ ಮಾತು ಬೆಳೆದು ಕೋಪಗೊಂಡ ಮಾವ ಚಾಕುವಿನಿಂದ ಸೊಸೆಯ ಗಂಟಲನ್ನು ಸೀಳಿ ಕೊಲೆಮಾಡಿದ್ದಾನೆ.
ಸೊಸೆಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಭಾಗತ್ ರಕ್ತಸಿಕ್ಕ ಬಟ್ಟೆಯಲ್ಲೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ನಡೆದದ್ದೆಲ್ಲವನ್ನು ಹೇಳಿ ಶರಣಾಗಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಮ್ಮ ಸೊಸೆ ನಮ್ಮ ಜೊತೆ ಸದಾ ಜಗಳವಾಡುತ್ತಿದ್ದಳು. ಮಗ-ಸೊಸೆ ಮಧ್ಯೆ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ. ಹೀಗಾಗಿ ನನ್ನ ಹೆಂಡತಿಗೆ ಹಾಗೂ ನನಗೆ ಸದಾ ಬೈಯುತ್ತಿದ್ದಳು ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ.
ಕಳೆದ ತಿಂಗಳು ವಿದ್ಯುತ್ ಬಿಲ್ ಜಾಸ್ತಿ ಬಂದ ಕಾರಣ ಜಗಳ ನಡೆದಿತ್ತು. ಬಳಿಕ ಸೊಸೆ ನೀರಜಾ ಅಡುಗೆ ಮನೆ, ಬಾತ್ರೂಂ ಸೇರಿದಂತೆ ಮನೆಯ ಮೆಟ್ಟಿಲುಗಳ ಬಳಿ ಇದ್ದ ಎಲ್ಲಾ ಬಲ್ಬ್ ಗಳನ್ನು ತೆಗೆದು ಹಾಕಿದ್ದಳು. ಇದರಿಂದ ನನಗೆ ಹಾಗೂ ನನ್ನ ಪತ್ನಿಗೆ ಕತ್ತಲಾದಾಗ ಓಡಾಡಲು ತೊಂದರೆಯಾಗುತಿತ್ತು. ಹೀಗಾಗಿ ಮತ್ತೆ ಬಲ್ಬ್ ಗಳನ್ನು ಹಾಕುವಂತೆ ಹೇಳಿದ್ದೇವು. ಆ ಕಾರಣಕ್ಕೆ ಜಗಳ ನಡೆದಿತ್ತು ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.
ಮೃತ ಮಹಿಳೆಯ ಪೋಷಕರು ಆಕೆಯ ಅತ್ತೆ-ಮಾವ ತಮ್ಮ ಮಗಳಿಗೆ ಕೌಟುಂಬಿಕ ಹಿಂಸೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.