ನವದೆಹಲಿ: ದಕ್ಷಿಣ ದೆಹಲಿಯ (Delhi) ಆಯಾ ನಗರದಲ್ಲಿ ಎರಡು ಕುಟುಂಬಗಳ ನಡುವಿನ ದೀರ್ಘಕಾಲದ ಕಲಹ (Family Fight) ವ್ಯಕ್ತಿಯೊಬ್ಬರ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ರತನ್ ಲೋಹಿಯಾ (52) ಹತ್ಯೆಯಾದ ವ್ಯಕ್ತಿ. ನ.30 ರಂದು ಈ ಹತ್ಯೆ ನಡೆದಿದ್ದು, ಪೊಲೀಸರು ಮೃತದೇಹದಿಂದ 69 ಗುಂಡುಗಳನ್ನು (Bullets) ವಶಕ್ಕೆ ಪಡೆದಿದ್ದಾರೆ.
ನವೆಂಬರ್ 30ರ ಮುಂಜಾನೆ ಲೋಹಿಯಾ ತಮ್ಮ ಮನೆಯಿಂದ ಕೆಲಸಕ್ಕಾಗಿ ಹೊರಗೆ ಬಂದಾಗ ದುಷ್ಕರ್ಮಿಗಳ ಗುಂಪು ಅವರನ್ನು ಸುತ್ತುವರೆದು ಗುಂಡು ಹಾರಿಸಿತ್ತು. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಸ್ಥಳದಿಂದ ಖಾಲಿ ಶೆಲ್ಗಳು ಮತ್ತು ಮೂರು ಜೀವಂತ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡಿದ್ದರು. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಕೇಸ್ – ಆರೋಪಿಗಳಿಗೆ ಜಾಮೀನು ಮಂಜೂರು
ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲಿಸಿದ್ದ ಪೊಲೀಸರಿಗೆ ದುಷ್ಕರ್ಮಿಗಳು ಕಪ್ಪು ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಕಾದು ನಿಂತಿದ್ದು ಪತ್ತೆಯಾಗಿತ್ತು. ಕಾರಿನ ನಂಬರ್ ಪ್ಲೇಟ್ನ್ನು ಉದ್ದೇಶಪೂರ್ವಕವಾಗಿಯೇ ತೆಗೆದು ಹಾಕಿದ್ದು ಕಂಡುಬಂದಿತ್ತು. ಇನ್ನೂ ಭಾರತದ ಹೊರಗಿನ ದರೋಡೆಕೋರರಿಗೆ ರತನ್ ಲೋಹಿಯಾ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೌಟುಂಬಿಕ ಕಲಹ
ರಬ್ಬೀರ್ ಅವರ ಮಗ ಅರುಣ್ನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದಿದ್ದರು. ಅರುಣ್ ಹತ್ಯೆ ಪ್ರಕರಣದಲ್ಲಿ, ರತನ್ನ ಹಿರಿಯ ಮಗ ದೀಪಕ್ನನ್ನು ಬಂಧಿಸಲಾಗಿತ್ತು. ಅರುಣ್ ಹತ್ಯೆಯ ಸೇಡು ತೀರಿಸಿಕೊಳ್ಳಲು ರತನ್ ಹತ್ಯೆ ನಡೆದಿದೆ ಎಂದು ಅವರ ಕುಟುಂಬ ಆರೋಪಿಸಿದೆ.
ಹತ್ಯೆಗೀಡಾದ ಲೋಹಿಯಾ ಮಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಬಹಳ ಸಮಯದಿಂದ ನಮ್ಮ ತಂದೆಗೆ ಬೆದರಿಕೆ ಹಾಕುತ್ತಿದ್ದರು. ಅವರಿಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿರಲಿಲ್ಲ. ಯುವಕರ ನಡುವಿನ ಘರ್ಷಣೆಯಿಂದ ಕೌಟುಂಬಿಕ ಕಲಹ ಉಂಟಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಗುಂಡೇಟಿಗೆ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಬಲಿ – ಬಾಂಗ್ಲಾ ಮತ್ತೆ ಧಗಧಗ

