ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡದಂತೆ ತಡೆದಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಇ-ರಿಕ್ಷಾ ಚಾಲಕರಾದ 34 ವರ್ಷದ ರವಿಂದರ್ ಕುಮಾರ್ ಕೊಲೆಯಾದ ದುರ್ದೈವಿ. ಶನಿವಾರದಂದು ಉತ್ತರ ದೆಹಲಿಯ ಮುಖರ್ಜಿನಗರದ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರೋ ಇ- ರಿಕ್ಷಾ ಸ್ಟ್ಯಾಂಡ್ ಬಳಿಯ ರಸ್ತೆಯಲ್ಲಿ ಇಬ್ಬರು ಯುವಕರು ಮೂತ್ರವಿಸರ್ಜನೆ ಮಾಡುತ್ತಿದ್ದಾಗ ರವಿಂದರ್ ಅದನ್ನು ವಿರೋಧಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ರವಿಂದರ್ ಅವರಿಗೆ ಬೆದರಿಕೆ ಹಾಕಿದ್ದು, ಕೆಲವು ಗಂಟೆಗಳ ನಂತರ ದೊಡ್ಡ ತಂಡದೊಂದಿಗೆ ಬಂದು ಕಲ್ಲುಗಳನ್ನು ತುಂಬಿದ ಟವೆಲ್ ಹಾಗೂ ಹಿತ್ತಾಳೆ ಲೋಹದಿಂದ ಸುಮಾರು 20 ನಿಮಿಷಗಳವರೆಗೆ ಥಳಿಸಿದ್ರು ಎಂದು ರವಿಂದರ್ ಕುಟುಂಬಸ್ಥರು ಹಾಗೂ ಸ್ನೇಹಿತರು ಹೇಳಿದ್ದಾರೆ.
ರಾತ್ರಿ ಸುಮಾರು 8.30ರ ವೇಳೆಯಲ್ಲಿ ಈ ಘಟನೆ ನಡೆದಿದ್ದು, ರವಿಂದರ್ ಅವರ ರಕ್ಷಣೆಗೆ ಯಾರೂ ಮುಂದೆ ಬಂದಿಲ್ಲ. ನಂತರ ಅದೇ ರಾತ್ರಿ ರವಿಂದರ್ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂಧು ಪೊಲೀಸ್ ಉಪ ಆಯುಕ್ತರಾದ ಮಿಲಿಂದ್ ಮಹಾದಿಯೋ ಸುದ್ಧಿ ಸಂಸ್ಥೆಗೆ ತಿಳಿಸಿದ್ದಾರೆ. 12 ರಿಂದ 13 ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ನಮಗೆ ಅನ್ನಿಸುತ್ತಿದೆ. ಆದ್ರೆ ಅದಕ್ಕಿಂತಲೂ ಹೆಚ್ಚಿನವರು ಇರಬಹುದು ಎಂದು ಹೇಳಿದ್ದಾರೆ.
ರವಿಂದರ್ ಅವರ ಸಹೋದರ ವಿಜೇಂದರ್ ಈ ಬಗ್ಗೆ ಹೇಳಿಕೆ ನೀಡಿದ್ದು, ಶನಿವಾರ ಆತ ಮನೆಗೆ ಬಂದಾಗ ಯಾವುದೇ ಕಾಣುವಂತಹ ಗಾಯಗಳು ಇರಲಿಲ್ಲವಾದ್ದರಿಂದ ವೈದ್ಯರ ಬಳಿ ಹೋಗ್ಲಿಲ್ಲ. ಆದ್ರೆ ಕೆಲ ಸಮಯದ ನಂತರ ಪ್ರಜ್ಞೆ ತಪ್ಪಿದ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರವಿಂದರ್ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ರು ಅಂತ ತಿಳಿಸಿದ್ದಾರೆ.
ರವಿಂದರ್ ಸಾವಿಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿಷಾದ ವ್ಯಕ್ತಪಡಿಸಿದ್ದಾರೆ. ರವಿಂದರ್ ಸ್ವಚ್ಛ ಭಾರತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದವರಾಗಿದ್ರು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿಯ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.