ನವದೆಹಲಿ: ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಾಣೆಯಾಗಿದ್ದ ಬಾಲಕ ಕೊಲೆಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನನ್ನ ಪತ್ನಿ ಸ್ನಾನ ಮಾಡುತ್ತಿದ್ದ ವೇಳೆ 6 ವರ್ಷದ ಬಾಲಕ ಇಣುಕಿ ನೋಡುತ್ತಿದ್ದ ಎಂದು ಬಂಧಿತ ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ದೆಹಲಿಯ ಓಖ್ಲಾ 2ನೇ ಹಂತದಲ್ಲಿ ಬುಧವಾರ ಸಂಜೆ ಆಟವಾಡುತ್ತಿದ್ದ ಜೀವನ್ ಜ್ಯೋತಿ ರಾಜೀವ್ ಕ್ಯಾಂಪ್ ನ ಬಾಲಕ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಆದರೆ ಶುಕ್ರವಾರ ಬೆಳಗ್ಗೆ ಓಖ್ಲಾ 2ನೇ ಹಂತದ ಮನೆಯೊಂದರಿಂದ ದುರ್ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ನೆರೆಹೊರೆಯವರು ದುರ್ವಾಸನೆ ಬರುತ್ತಿದ್ದ ಕೊಠಡಿಯ ಬಾಗಿಲು ತೆಗೆದಿದ್ದಾರೆ. ನಾವು ಇಲಿ ಸತ್ತಿರಬೇಕು ಎಂದು ಭಾವಿಸಿ ಬಾಗಿಲು ತೆಗೆದೆವು. ಆದರೆ ಕೊಠಡಿಯಲ್ಲಿದ್ದ ಬೆಡ್ ಬಾಕ್ಸ್ ನಲ್ಲಿ ಗೋಣಿ ಚೀಲವಿತ್ತು. ಅಲ್ಲೇ ಬಾಲಕನ ತಲೆ ಮತ್ತು ಕೈ ಕಾಣಿಸುತ್ತಿತ್ತು. ಬಾಲಕನ ಮುಖವನ್ನು ಕಪ್ಪು ಬಣ್ಣದ ಬಟ್ಟೆಯಿಂದ ಕಟ್ಟಿಹಾಕಿದ್ದರು ಎಂದು ಪ್ರತ್ಯಕ್ಷದರ್ಶಿ ರಾಧಾ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ರೋಹಿತ್ ಎಂಬಾತನನ್ನು ಬಂಧಿಸಿದ್ದೇವೆ. ವಿಚಾರಣೆ ವೇಳೆ ರೋಹಿತ್, ನನ್ನ ಪತ್ನಿ ಸ್ನಾನ ಮಾಡುತ್ತಿದ್ದಾಗ 6 ವರ್ಷದ ಬಾಲಕ ಇಣುಕಿ ನೋಡುತ್ತಿದ್ದ ಹಾಗೂ ಅಸಭ್ಯವಾಗಿ ಕಮೆಂಟ್ ಮಾಡಿದ್ದ. ಇದರಿಂದ ಸಿಟ್ಟಿಗೆದ್ದು ನಾನು ಆತನ ಮೇಲೆ ದಾಳಿ ಮಾಡಿದೆ. ಈ ವೇಳೆ ಮಂಚಕ್ಕೆ ಬಾಲಕನ ತಲೆ ಬಡಿಯಿತು. ರಕ್ತಸ್ರಾವ ಆರಂಭವಾಗಿತ್ತು. ರಕ್ತ ಸೋರಿಕೆಯಾಗದಂತೆ ಕಪ್ಪು ಬಣ್ಣದ ಬಟ್ಟೆಯನ್ನು ಸುತ್ತಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ರೋಮಿಲ್ ಬಾನಿಯಾ ಹೇಳಿದ್ದಾರೆ.
ಆದರೆ ನನ್ನ ಮಗ ಹಾಗೇನೂ ಮಾಡಿಲ್ಲ. ಅಕ್ಕಪಕ್ಕದ ಮನೆಯವರಿಗೂ ನನ್ನ ಮಗನ ಬಗ್ಗೆ ಯಾವುದೇ ದೂರುಗಳಿಲ್ಲ ಎಂದು ಮೃತ ಬಾಲಕನ ತಂದೆ ಹೇಳಿದ್ದಾರೆ.