ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಪ್ರಚಾರ ನಡೆಸಲು ಮಧ್ಯಂತರ ಜಾಮೀನು ನೀಡುವಂತೆ ಕೋರಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯ (Manish Sisodia) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರೋಸ್ ಅವೆನ್ಯೋ ಕೋರ್ಟ್ ಆದೇಶ ಕಾಯ್ದಿರಿಸಿದೆ. ಏಪ್ರಿಲ್ 30 ರಂದು ತನ್ನ ತೀರ್ಪು ಪ್ರಕಟಿಸಲಿದೆ.
ದೆಹಲಿಯ ಹೊಸ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Delhi liquor scam case) ಸಂಬಂಧಿಸಿದಂತೆ ಮನೀಶ್ ಸಿಸೋಡಿಯ ಅವರನ್ನು ಇಡಿ ಬಂಧಿಸಿದದು, ಸದ್ಯ ಅವರು ನ್ಯಾಯಂಗ ಬಂಧನದಲ್ಲಿದ್ದಾರೆ. ಇದೇ ಪ್ರಕರಣದಲ್ಲಿ ಸಿಬಿಐ ಕೂಡಾ ತನಿಖೆ ನಡೆಸುತ್ತಿದೆ. ಈ ಹಿಂದೆ ಎರಡು ಪ್ರಕರಣಗಳಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆದ ಹಿನ್ನೆಲೆ ಚುನಾವಣಾ ಪ್ರಚಾರಕ್ಕೆ ಅವಕಾಶ ಕೋರಿ ಹೊಸ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಕೇಜ್ರಿವಾಲ್ರನ್ನ ನಿಧಾನಗತಿಯಲ್ಲಿ ಸಾವಿನತ್ತ ತಳ್ಳಲಾಗ್ತಿದೆ: ಆಪ್ ಆರೋಪ
ವಿಚಾರಣೆ ವೇಳೆ ವಾದ ಮಂಡಿಸಿದ ಸಿಬಿಐ ಪ್ರಾಸಿಕ್ಯೂಟರ್ ಪಂಕಜ್ ಗುಪ್ತಾ, ಜಾಮೀನು ಅರ್ಜಿಯನ್ನು ವಿರೋಧಿಸಿದರು ಮತ್ತು ಪಿಎಂಎಲ್ಎ ಅಡಿಯಲ್ಲಿ ಜಾಮೀನು ಮಂಜೂರು ಮಾಡುವ ಕಠಿಣತೆಯನ್ನು ಸಿಸೋಡಿಯಾ ತೃಪ್ತಿಪಡಿಸುವುದಿಲ್ಲ ಎಂದು ಹೇಳಿದರು. ಸಿಸೋಡಿಯಾ ಅವರು “ರಾಜಕೀಯ ಪ್ರಭಾವ” ಹೊಂದಿರುವ ಪ್ರಬಲ ವ್ಯಕ್ತಿ, ಅವರಿಗೆ ಚುನಾವಣಾ ಹೊತ್ತಲ್ಲಿ ಜಾಮೀನು ನೀಡಬಾರದು, ಅವರು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಜಾರಿ ನಿರ್ದೇಶನಾಲಯದ (ಇಡಿ) ಪರ ವಿಶೇಷ ವಕೀಲ ಜೋಹೆಬ್ ಹೊಸೈನ್ ವಾದ ಮಂಡಿಸಿ, ಪ್ರಕರಣದಲ್ಲಿ ಸಿಸೋಡಿಯಾ ಪ್ರಮುಖ ವ್ಯಕ್ತಿಯಾಗಿದ್ದಾರೆ, ಪ್ರಕರಣ ತನಿಖೆ ನಡೆಯುತ್ತಿರುವ ಈ ಹಂತದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ಸದ್ಯ ಆದೇಶ ಕಾಯ್ದಿರಿಸಿದೆ.