ನವದೆಹಲಿ: ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ (CBI) ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಸರ್ಕಾರದ ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia) ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಸಿಸೋಡಿಯಾ ಅರ್ಜಿಯನ್ನು ದಿನದ ಕೊನೆಯಲ್ಲಿ ವಿಚಾರಣೆ ನಡೆಸುವುದಾಗಿ ಸಿಜೆಐ ಪೀಠ ಹೇಳಿದೆ.
ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಹಿರಿಯ ವಕೀಲ ಅಭಿಷೇಕ ಮನುಸಿಂಘ್ವಿ ಸಿಜೆಐ ಡಿ.ವೈ ಚಂದ್ರಚೂಡ್ ಪೀಠದ ಮುಂದೆ ಪ್ರಸ್ತಾಪಿಸಿದರು. ಪ್ರಕರಣದ ತುರ್ತು ವಿಚಾರಣೆ ನಡೆಸಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿ ಪೀಠ ಈಗಾಗಲೇ ವಿಚಾರಣೆ ಅರ್ಜಿಗಳು ಪಟ್ಟಿಯಾಗಿರುವ ಹಿನ್ನೆಲೆ ಕಲಾಪದ ಅಂತ್ಯದಲ್ಲಿ ವಿಚಾರಣೆ ನಡೆಸುವ ಭರವಸೆ ನೀಡಿದರು.
ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು, ಅಕ್ರಮಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಸಿಬಿಐ ಮನೀಶ್ ಸಿಸೋಡಿಯಾ ಅವರನ್ನು 8 ಗಂಟೆಗಳ ಸುದೀರ್ಘ ವಿಚಾರಣೆ ಬಳಿಕ ಕಳೆದ ಭಾನುವಾರ ಬಂಧಿಸಿತ್ತು. ಸೋಮವಾರ ಅವರನ್ನು ಸಿಬಿಐ ವಿಶೇಷ ನ್ಯಾಯಲಯದ ಮುಂದೆ ಹಾಜರುಪಡಿಸಿ 5 ದಿನಗಳ ಕಸ್ಟಡಿಗೂ ಪಡೆದಿದೆ. ಇದನ್ನೂ ಓದಿ: `ಕೈಲಾಸ’ ಹಿಂದೂ ಧರ್ಮದ ಮೊದಲ ಸಾರ್ವಭೌಮ ರಾಜ್ಯ- UN ಮಹಾಸಭೆಯಲ್ಲಿ ನಿತ್ಯಾನಂದ ಶಿಷ್ಯೆ ಪ್ರತಿಪಾದನೆ
ಮನೀಶ್ ಸಿಸೋಡಿಯಾ ಬಂಧನ ಖಂಡಿಸಿ ಸೋಮವಾರ ದೆಹಲಿ ಸೇರಿದಂತೆ ದೇಶಾದ್ಯಂತ ಹಲವು ಕಡೆ ಸಿಬಿಐ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ದೆಹಲಿಯಲ್ಲಿ ಸಿಬಿಐ ಕೇಂದ್ರ ಕಚೇರಿ, ಆಮ್ ಆದ್ಮಿ ಪಕ್ಷದ ಕಚೇರಿ ಮುಂಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದು ಕೇಂದ್ರ ಸರ್ಕಾರದ ಸಂಚಿನ ಮುಂದುವರಿದ ಭಾಗ ಎಂದು ಆರೋಪಿಸಿದರು. ಇದನ್ನೂ ಓದಿ: ಮೋದಿ ಭೇಟಿಯಿಂದ ʼಕೈʼ ನಾಯಕರಿಗೆ ಭ್ರಮನಿರಸನ: ಬೊಮ್ಮಾಯಿ