ನವದೆಹಲಿ: ಇಡಿ ಸಮನ್ಸ್ ರದ್ದು ಮತ್ತು ಬೆಂಗಳೂರಿನಲ್ಲಿ ವಿಚಾರಣೆ ನಡೆಸುವಂತೆ ಕೋರಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪತ್ನಿ ಮತ್ತು ತಾಯಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆಗೆ ಬರಲಿದೆ.
ದೆಹಲಿ ಹೈಕೋರ್ಟ್ ನ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ಬರಲಿದ್ದು, ಇಂದು ನಿರ್ಣಾಯಕ ಆದೇಶ ಹೊರ ಬರುವ ಸಾಧ್ಯತೆ ಇದೆ. ನಾಳೆ ದೆಹಲಿಯ ಇಡಿ ಕಚೇರಿಗೆ ಬಂದು ವಿಚಾರಣೆ ಹಾಜರಾಗಬೇಕು ಅಂತಾ ಈಗಾಗಲೇ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದು, ಇಂದು ಹೈ ಕೋರ್ಟ್ ನೀಡುವ ಮಧ್ಯಂತರ ಆದೇಶ ಡಿ.ಕೆ ಕುಟುಂಬಕ್ಕೆ ಮಹತ್ವ ಆಗಲಿದೆ.
ಅಕ್ರಮ ಹಣ ವರ್ಗಾವಣೆ ಮತ್ತು ಬೇನಾಮಿ ಆಸ್ತಿ ಗಳಿಕೆ ಪ್ರಕರಣದಡಿ ದೆಹಲಿ ಇಡಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಕಳೆದ ತಿಂಗಳು ಇಡಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಅವರಿಗೆ ಸಮನ್ಸ್ ನೀಡಿದ್ದರು. ಆದರೆ ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ ಗೌರಮ್ಮ ದೆಹಲಿಯಲ್ಲಿ ವಿಚಾರಣೆ ಹಾಜರಾಗಲು ಸಾಧ್ಯವಿಲ್ಲ ಜೊತೆಗೆ ಉಷಾ ಅವರನ್ನು ಬೆಂಗಳೂರಿನಲ್ಲೇ ವಿಚಾರಣೆ ಒಳ ಪಡಿಸಬೇಕು ಅಂತಾ ಮನವಿ ಮಾಡಿ ದಿಲ್ಲಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು.
ಈಗಾಗಲೇ ನಾಲ್ಕು ಬಾರಿ ಈ ಅರ್ಜಿ ವಿಚಾರಣೆ ನಡೆಸಿರುವ ಪೀಠ ಇಂದು ನಿರ್ಣಾಯಕ ತಿರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಉಷಾ ಮತ್ತು ಗೌರಮ್ಮ ಅವರ ಮನವಿಗೆ ಒಪ್ಪಿಕೊಂಡಲ್ಲಿ ಬೆಂಗಳೂರಿನಲ್ಲಿ ವಿಚಾರಣೆ ನಡೆಯಲಿದ್ದು, ಹೈ ಕೋರ್ಟ್ ಇವರ ಮನವಿ ತಿರಸ್ಕರಿದಲ್ಲಿ ನಾಳೆ ದೆಹಲಿಯಲ್ಲಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆ ಒಳಪಡಬೇಕಿದೆ.