ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವಿಕೆ ಹಿನ್ನೆಲೆ ಮಾರ್ಚ್ 16ರಿಂದ ತುರ್ತು ಅರ್ಜಿಗಳನ್ನು ಮಾತ್ರ ವಿಚಾರಣೆ ನಡೆಸಲಾಗುವುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ನೇತೃತ್ವದಲ್ಲಿ ಇಂದು ನಡೆದ ಹೈಕೋರ್ಟ್ ಆಡಳಿತಾಧಿಕಾರಿಗಳ ಜೊತೆಗಿನ ಸಭೆ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ.
ಹೋಳಿ ಹಬ್ಬದ ರಜೆ ಬಳಿಕ ಸೋಮವಾರದಿಂದ ಕೋರ್ಟ್ ಪುನಾರಂಭವಾಗಲಿದ್ದು, ದೆಹಲಿಯಲ್ಲೂ ಸೋಂಕು ಹರಡುವ ಭೀತಿ ಹಿನ್ನೆಲೆ ಕೇವಲ ತುರ್ತು ಅರ್ಜಿಗಳ ವಿಚಾರಣೆ ನಡೆಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ. ಸಾಮಾನ್ಯ ಕೋರ್ಟ್ ವಿಚಾರಣೆಗಳು ನಡೆಸಿದರೆ ಕೋರ್ಟಿಗೆ ಆಗಮಿಸುವ ಜನರ ಸಂಖ್ಯೆ ಹೆಚ್ಚಲಿದ್ದು, ಈ ವೇಳೆ ವೈರಸ್ ಹೆಚ್ಚು ಪಸರಿಸಿಬಹುದು. ಹೀಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಮಾರ್ಚ್ 31ರವರೆಗೂ ಕೋರ್ಟ್ ಗೆ ಇಂಟರ್ನಿಗಳಿಗೂ ಪ್ರವೇಶ ನೀಡುವುದಿಲ್ಲ ಎಂದು ಹೈಕೋರ್ಟ್ ಆಡಳಿತಾಧಿಕಾರಿಗಳು ಸಭೆ ಬಳಿಕ ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ದಿನಾಂಕ ಮುಂದೂಡಿಕೆ – ಏ.15ಕ್ಕೆ ಟೂರ್ನಿ ಆರಂಭ
ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ಎಲ್ಲಾ ನಮೂನೆಯ ಥರ್ಮಲ್ ಸ್ಕ್ಯಾನರ್ ಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಜೊತೆಗೆ ಮುಂದಿನ ಆದೇಶದವರೆಗೆ ನ್ಯಾಯಾಲಯದ ಆವರಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು, ಚುನಾವಣೆಗಳಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ.
ಇದರೊಂದಿಗೆ ಸಾಕ್ಷಿಗಳು ಅಥಾವ ಕಕ್ಷಿಗಾರರನ್ನು ವೈಯಕ್ತಿಕವಾಗಿ ಕೋರ್ಟಿಗೆ ಹಾಜರಾಗಲು ಒತ್ತಾಯಿಸದಿರಲು ನಿರ್ಧರಿಸಿದ್ದು, ಅನಿವಾರ್ಯವಲ್ಲದವರಿಗೆ ಕೋರ್ಟ್ ಭೇಟಿಗೆ ಪಾಸ್ ನೀಡದಂತೆ ಸೂಚಿಸಿದೆ. ಇತರೆ ಕೋರ್ಟ್ ಗಳು ಇದೇ ಮಾದರಿಯನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.