ನವದೆಹಲಿ: ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಪರ ಬಂದಿವೆ. ದೆಹಲಿಯ ದೊರೆಯಾಗಲು ಈ ಬಾರಿ ಹ್ಯಾಟ್ರಿಕ್ ಕನಸು ಕಂಡಿದ್ದ ಆಮ್ ಆದ್ಮಿ ಪಕ್ಷದ ನಿರೀಕ್ಷೆ ಹುಸಿಯಾಗಲಿದೆ ಅನ್ನೋದು ಎಕ್ಸಿಟ್ ಪೋಲ್ ಫಲಿತಾಂಶ. ಅದರಂತೆ ದೆಹಲಿಯಲ್ಲಿ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದೆ. ದೆಹಲಿ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಅದರ ಭವಿಷ್ಯವಾಣಿಗಳನ್ನು ಎಎಪಿ ತಿರಸ್ಕರಿಸಿದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಹಾಗಿದ್ರೆ ಸಮೀಕ್ಷೆ ಸುಳ್ಳಾಗಿ ಆಪ್ ಕನಸು ಈಡೇರುತ್ತಾ? ಈ ನಡುವೆ ಕೇಜ್ರಿವಾಲ್ ಎದುರಿಸಿದ ಸವಾಲು ಸಂಕಷ್ಟಗಳೇನು? ಅನ್ನೋದನ್ನ ತಿಳಿಯಬೇಕಿದ್ರೆ ಮುಂದೆ ಓದಿ…
ಎಎಪಿಯ ಮತದ ಪಾಲು ಯಾವಾಗಲೂ ಚುನಾವಣೋತ್ತರ ಸಮೀಕ್ಷೆಗಳಲ್ಲಿ ತೋರಿಸಿದ್ದಕ್ಕಿಂತ ಹೆಚ್ಚು ಬಂದಿದೆ. ಹೀಗಾಗಿ, ಈ ಬಾರಿಯೂ ಹೆಚ್ಚು ಸ್ಥಾನಗಳು ಬರಲಿವೆ ಎಂದು ಆಪ್ ಹೇಳಿದೆ.
ಅಂದಹಾಗೇ ಆಪ್ ಹೇಳುತ್ತಿರುವುದು ಸತ್ಯವೂ ಹೌದು. ಈ ಹಿಂದೆ ನಡೆದ ಎರಡು ವಿಧಾನಸಭೆ ಚುನಾವಣೆಗಳ ಸಮಯದಲ್ಲಿ ಪ್ರಕಟವಾಗಿದ್ದ ಚುನಾವಣೊತ್ತರ ಸಮೀಕ್ಷೆಗಳಲ್ಲಿ ಆಪ್ಗೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆದರೆ ಫಲಿತಾಂಶ ಪ್ರಕಟವಾದಾಗ ಆಪ್ ಅಮೋಘವಾದ ಗೆಲುವು ದಾಖಲಿಸಿತ್ತು. ಈಗಲೂ ಆಪ್ ಅದೇ ನಿರೀಕ್ಷೆಯಲ್ಲಿದೆ. ಹ್ಯಾಟ್ರಿಕ್ ಗೆಲುವು ಎದುರು ನೋಡುತ್ತಿದೆ.
ಅಷ್ಟಕ್ಕೂ ಮೂರು ಬಾರಿ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಈ ಅವಧಿಯಲ್ಲಿ ಅನುಭವಿಸಿದ ಸಂಕಷ್ಟ ಎದುರಿಸಿದ ಸವಾಲುಗಳು ಒಂದೇರಡಲ್ಲ.
ಕೇಜ್ರಿ ಎದುರಿಸಿದ ಸಂಕಷ್ಟಗಳೇನು?
* ಮದ್ಯನೀತಿಯಲ್ಲಿ ಭ್ರಷ್ಟಚಾರದ ಆರೋಪದಲ್ಲಿ ಜೈಲು
* ತಾವು ಮಾತ್ರವಲ್ಲದೇ ಹಲವು ನಾಯಕರು ಜೈಲುಪಾಲು
* ಆಪ್ ಬಹುತೇಕ ಮುಗಿದೆ ಹೊಯ್ತು ಎನ್ನುವ ಪರಿಸ್ಥಿತಿ ನಿರ್ಮಾಣ
* ಜಾಮೀನು ಮೇಲೆ ಹೊಂದು ಸಿಎಂ ಹುದ್ದೆಗೆ ರಾಜೀನಾಮೆ
* ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಮೇಲಿನ ದೌರ್ಜನ್ಯ ಪ್ರಕರಣ
* ಪ್ರತಿ ಹಂತದಲ್ಲೂ ಲೆಪ್ಟಿನೆಂಟ್ ಗರ್ವನರ್ ಜೊತೆಗೆ ಸಂಘರ್ಷ
* ಚುನಾವಣಾ ಅವಧಿಯಲ್ಲಿ ಶೀಷ್ ಮಹಲ್ ಆರೋಪ ಸದ್ದು
* ಆಪ್ನ 8 ಶಾಸಕರು ಬಿಜೆಪಿ ಸೇರ್ಪಡೆಯಾಗಿ ಶಾಕ್
ಹೀಗೆ ಆಪ್ ಸಂಚಾಲಕ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸಾಲು ಸಾಲು ಸವಾಲು ಎದುರಿಸಬೇಕಾಯ್ತು. ಹೀಗೆ ಜೈಲು ಸೇರಿ ಕಂಬಿಗಳ ಹಿಂದೆ ಕಾಲ ಕಳೆದ ಕೇಜ್ರಿವಾಲ್ ಅಲ್ಲಿಂದ ಹೊರ ಬಂದು ಹಲವು ಸವಾಲು ಎದುರಿಸಿದರು.
ಜನರಿಂದ ಮಾನ್ಯತೆ ಪಡೆಯದೇ ಮತ್ತೆ ಸಿಎಂ ಕುರ್ಚಿ ಮೇಲೆ ಕೂರಲ್ಲ ಎಂದು ಶಪಥ ಮಾಡಿದ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಈ ಹೋರಾಟಗಳ ನಡುವೆ ಚುನಾವಣೆ ಎದುರಿಸಿರುವ ಟೋಪಿವಾಲಾ ಮತ್ತೊಂದು ಫಿನಿಕ್ಸ್ ನಂತೆ ಎದ್ದು ಬಂದು ಮಾಡಿದ ಶಪಥದಂತೆ ಜನರಿಂದ ಬಹುಮತ ಪಡೆದು ಸಿಎಂ ಹುದ್ದೆ ಅಲಂಕರಿಸುತ್ತಾರಾ ಅನ್ನೋದು ಫಲಿತಾಂಶ ಬಂದ್ಮೇಲೆ ಗೊತ್ತಾಗಲಿದೆ.