– ಮತ್ತೆ ಆಪ್ ಸುಂಟರಗಾಳಿಯೋ?
– ಸಮೀಕ್ಷೆ ಸುಳ್ಳಾಗಿಸಿ ಗೆಲ್ಲುತ್ತಾ ಬಿಜೆಪಿ?
ನವದೆಹಲಿ: ದೆಹಲಿಯಲ್ಲಿ ದರ್ಬಾರ್ ನಡೆಸೋರು ಯಾರು? ಕಮಲವನ್ನ ಮತ್ತೊಮ್ಮೆ ಗುಡಿಸಿ ಹಾಕಿಬಿಡುತ್ತಾ ಪೊರಕೆ? ಆಮ್ ಆದ್ಮಿ ಪಾರ್ಟಿ ಸುನಾಮಿ ಎದುರು ಬಿಜೆಪಿ ಧೂಳಿಪಟವಾಗುತ್ತಾ? ಅರವಿಂದ್ ಕೇಜ್ರಿವಾಲ್ ಎದುರು ಚಾಣಾಕ್ಯ ಜೋಡಿಯೆಂದೇ ಕರೆಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ-ಅಮಿತ್ ಶಾ ಕೂಟಕ್ಕೆ ದೆಹಲಿಯಲ್ಲಿ ಹೇಳಹೇಸರಿಲ್ಲದಂತೆ ಸೋಲಾಗುತ್ತಾ? ಕಾಮನ್ಮ್ಯಾನ್ ಎಂದೇ ಕರೆಸಿಕೊಂಡ ಕೇಜ್ರಿವಾಲ್ ಸತತ ಮೂರನೇ ಬಾರಿ ಮುಖ್ಯಮಂತ್ರಿ ಗಾದಿ ಏರ್ತಾರಾ? 20 ವರ್ಷಗಳಿಂದ ಕೈಗೆಟುಕದೇ ಹುಳಿ ದ್ರಾಕ್ಷಿಯಂತಾಗಿರುವ ಅಧಿಕಾರ ಈ ಬಾರಿಯಾದ್ರೂ ಬಿಜೆಪಿ ಪಾಳಯಕ್ಕೆ ಒಲಿಯುತ್ತಾ? ಛತ್ತೀಸ್ಗಢ, ಮಧ್ಯಪ್ರದೇಶ, ಜಾರ್ಖಂಡ್ನಲ್ಲಿ ಚೇತರಿಸಿಕೊಂಡ ಸಮಾಧಾನದಲ್ಲಿದ್ದ ಕಾಂಗ್ರೆಸ್ ದೆಹಲಿಯಲ್ಲಿ ಸೊನ್ನೆ ಸುತ್ತಿ ರಾಷ್ಟ್ರ ರಾಜಧಾನಿಯ ರಾಜಕೀಯ ಭೂಪಟದಿಂದ ಮತ್ತೊಮ್ಮೆ ಮಾಯವಾಗಲಿದ್ಯಾ? ಈ ಎಲ್ಲ ಪ್ರಶ್ನೆಗಳು, ಕುತೂಹಲಗಳಿಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.
ಒಟ್ಟು 70 ವಿಧಾನಸಭೆ ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ 672 ಅಭ್ಯರ್ಥಿಗಳ ಭವಿಷ್ಯ ಇನ್ನೇನು ಹೊರಬೀಳಲಿದ್ದು, ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. 2015ರ ಚುನಾವಣೆ ವೇಳೆ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಯಾರೂ ನಿರೀಕ್ಷಿಸದ ಸುಂಟರಗಾಳಿಯನ್ನೇ ಬೀಸಿತ್ತು. ಚುನಾವಣೋತ್ತರ ಸಮೀಕ್ಷೆಗಳನ್ನೆಲ್ಲ ಸುಳ್ಳು ಮಾಡಿ 70ರಲ್ಲಿ 67 ಸೀಟುಗಳನ್ನ ಗೆದ್ದು ಏಕಮೇವಚಕ್ರಾಧಿಪತ್ಯ ಸ್ಥಾಪಿಸಿತ್ತು. ಉಳಿದ ಮೂರು ಬಾಚಿಕೊಂಡಿದ್ದಷ್ಟೇ ಬಿಜೆಪಿಗೆ ಸಮಾಧಾನಕಾರಿಯಾಗಿತ್ತು. ಕಾಂಗ್ರೆಸ್ಗೆ ಒಂದೇ ಒಂದು ಕ್ಷೇತ್ರ ಗೆಲ್ಲದೇ ಮರ್ಮಾಘಾತ ಅನುಭವಿಸಿತ್ತು.
2015ರ ಚುನಾವಣಾ ಫಲಿತಾಂಶ:
ಆಪ್ – 67
ಬಿಜೆಪಿ – 03
ಕಾಂಗ್ರೆಸ್ -00
ಮತದಾನ ಮುಗಿದ ಬೆನ್ನಲ್ಲೇ ಹೊರಬಿದ್ದ ಎಲ್ಲ ಚುನಾವಣೋತ್ತರ ಸಮೀಕ್ಷೆಗಳಲ್ಲೂ ದೆಹಲಿಯಲ್ಲಿ ಮತ್ತೊಮ್ಮೆ ಕೇಜ್ರಿವಾಲ್ರದ್ದೇ ಹವಾ ಎಂದು ಭವಿಷ್ಯ ನುಡಿದಿವೆ. ಕೆಲವೊಂದು ಸಮೀಕ್ಷೆಗಳು ಬಿಜೆಪಿ ಈ ಬಾರಿ ತನ್ನ ಸ್ಥಾನಗಳನ್ನ ಸಂಖ್ಯೆಯನ್ನ ವರ್ಧಿಸಿಕೊಳ್ಳಲಿದೆ ಎಂದೂ ಕಾಂಗ್ರೆಸ್ ಮತ್ತೊಮ್ಮೆ ನೆಲಕಚ್ಚಲಿದೆ ಎಂದೂ ಊಹಿಸಿವೆ.
ಆಪ್ ಪ್ಲಸ್ ಪಾಯಿಂಟ್
– ಎರಡು ವರ್ಷಕ್ಕೂ ಮುನ್ನ ದೆಹಲಿ ಚುನಾವಣೆ ಮೇಲೆ ಕಣ್ಣಿಟ್ಟಿದ ಆಮ್ ಅದ್ಮಿ
– ಆರಂಭದಲ್ಲಿ ಬಿಜೆಪಿ ಟೀಕೆಗೆ ತಟಸ್ಥ ನಿಲುವು ಕಾಯ್ದುಕೊಂಡ ಕೇಜ್ರಿವಾಲ್
– ಜಗಳಗಂಟ ಎನ್ನುವ ಆರೋಪದಿಂದ ದೂರ ಉಳಿಯುವ ಪ್ರಯತ್ನ
– ಆಡಳಿತದ ಕಡೆಗೆ ಹೆಚ್ಚು ಗಮನ ಹರಿಸಿದ ಕೇಜ್ರಿವಾಲ್
– ಬಡವರು, ಸ್ಲಂ ನಿವಾಸಿಗಳಿಗೆ ಉಚಿತವಾಗಿ ವಿದ್ಯುತ್, ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಒತ್ತು
– ಆಸ್ಪತ್ರೆಗಳನ್ನು ಉನ್ನತೀಕರಿಸಿ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ; ಔಷಧಿ
– ಸ್ಲಂ ನಿವಾಸಿಗಳಿಗಾಗಿ ಮೊಹಲ್ಲಾ ಕ್ಲಿನಿಕ್ ವ್ಯವಸ್ಥೆ
– ಇತ್ತೀಚೆಗೆ ಮಹಿಳೆಯರಿಗೆ ಉಚಿತ ಸಾರಿಗೆ
– ಸಿಎಎ, ಎನ್ಆರ್.ಸಿ ಎನ್ಪಿಆರ್ ವಿಚಾರಗಳಲ್ಲಿ ಕೇಜ್ರಿವಾಲ್ ತಟಸ್ಥ
– ಬಿಜೆಪಿಯ ಭಯೋತ್ಪಾದಕ ಟೀಕೆಗೆ ಕೇಜ್ರಿವಾಲ್ ಮೌನ