ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಕೇಜ್ರಿವಾಲ್ ಮೇಲ್ಮನವಿ ಸಲ್ಲಿಕೆ

Public TV
1 Min Read
Arvind Kejriwal

ನವದೆಹಲಿ : ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಸುಪ್ರೀಂಕೋರ್ಟ್‌‌ಗೆ (Supreme Court) ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಹೈಕೋರ್ಟ್ ನಲ್ಲಿ ತಮ್ಮ ಅರ್ಜಿ ವಜಾ ಆದ ಹಿನ್ನೆಲೆ ಸುಪ್ರೀಂಕೋರ್ಟ್ ನಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಲಾಗಿದೆ.

ಅರ್ಜಿ ಸಲ್ಲಿಕೆ ಬೆನ್ನಲ್ಲೇ ದೆಹಲಿ ಹೈಕೋರ್ಟ್ (High Court) ತೀರ್ಪಿನ ವಿರುದ್ಧ ಕೇಜ್ರಿವಾಲ್ ಅವರ ಮನವಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಮನವಿ ಮಾಡಿದರು. ಬಂಧನವು ಅವಲಂಬಿತ ದಾಖಲೆಯನ್ನು ಆಧರಿಸಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಮಾಹಿತಿಯನ್ನು ಇಮೇಲ್ ಕಳುಹಿಸಿ ಪರಿಶೀಲಿಸಲಾಗುವುದು ಎಂದು ಸೂಚಿಸಿದರು.

ಹಗರಣದಲ್ಲಿ ಕೇಜ್ರಿವಾಲ್ ಶಾಮೀಲಾಗಿರುವುದನ್ನು ಸಾಬೀತುಪಡಿಸಲು ಪುರಾವೆಗಳಿವೆ ಎಂದು ಇಡಿ ಹೇಳಿದೆ. ಕಿಕ್‌ಬ್ಯಾಕ್ ಆಗಿ ಪಡೆದ ಹಣವನ್ನು 2022 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು ಇದಕ್ಕೆ ಸಂಬಂಧಿಸಿದ ಲಿಂಕ್‌ಗಳು ಸಹ ಪತ್ತೆಯಾಗಿದೆ ಎಂದು ಇಡಿ ಹೇಳಿದೆ. ಹೀಗಾಗಿ ಬಂಧನ ಕಾನೂನು ಬಾಹಿರವಾಗಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.

2 ಸಭೆಗಳಿಗೆ ಅನುಮತಿ: ಈ‌ ನಡುವೆ ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಕೇಜ್ರಿವಾಲ್ ವಾರಕ್ಕೆ ಐದು ಸಭೆಗಳಿಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರೋಸ್ ಅವೆನ್ಯೂ ಕೋರ್ಟ್ ವಜಾ ಮಾಡಿದೆ. ಸದ್ಯಕ್ಕೆ ವಾರಕ್ಕೆ ಎರಡು ಸಭೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಇದನ್ನು ಐದಕ್ಕೆ ಹೆಚ್ಚಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಇಡಿ, ಒಬ್ಬ ವ್ಯಕ್ತಿ ಒಮ್ಮೆ ಜೈಲಿನಲ್ಲಿದ್ದರೆ, ಹೊರಗೆ ಅವರ ನಿಲುವು ಅಪ್ರಸ್ತುತವಾಗುತ್ತದೆ. ಅವರನ್ನು ಇತರರಂತೆ ಸಮಾನವಾಗಿ ನೋಡಬೇಕಾಗುತ್ತದೆ ಎಂದು ವಾದಿಸಿತು. ಇದಕ್ಕೆ ಒಪ್ಪಿದ ಕೋರ್ಟ್ ಹೆಚ್ಚುವರಿ ಸಭೆಗಳು ನಡೆಸಲು ಅನುಮತಿ ನೀಡಲು ನಿರಾಕರಿಸಿತು.

Share This Article