ಲಕ್ನೋ: ದೇಶದಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಹಾವಳಿ ಹೆಚ್ಚುತ್ತಿದೆ. ಈ ನಡುವೆ ಉತ್ತರ ಪ್ರದೇಶ ಚುನಾವಣೆಯೂ ಸಮೀಪಿಸುತ್ತಿದೆ. ಇದರಿಂದ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು. ಚುನಾವಣೆಯನ್ನು ಮುಂದೂಡಿ, ಪ್ರಚಾರಕ್ಕಾಗಿ ನಡೆಸುವ ಸಭೆ-ಸಮಾರಂಭ, ರ್ಯಾಲಿಗಳನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗ ಹಾಗೂ ಪ್ರಧಾನಿ ಮೋದಿ ಅವರಿಗೆ ಅಲಹಾಬಾದ್ ಹೈಕೋರ್ಟ್ ಸಲಹೆ ನೀಡಿದೆ.
ಒಂದು ವೇಳೆ ರ್ಯಾಲಿಗಳನ್ನು ನಿಲ್ಲಿಸದಿದ್ದರೆ, ಕೊರೊನಾ ಎರಡನೇ ಅಲೆಗಿಂತ ಭೀಕರವಾಗಿ ಮೂರನೇ ಅಲೆಯು ವ್ಯಾಪಕವಾಗಿ ಹರಡಿ ಆತಂಕ ಸೃಷ್ಟಿಸಬಹುದು ಎಂದು ಕೋರ್ಟ್ ಎಚ್ಚರಿಸಿದೆ. ಇದನ್ನೂ ಓದಿ: ಗೋವು ನಮಗೆ ತಾಯಿ, ಪವಿತ್ರ: ನರೇಂದ್ರ ಮೋದಿ
ಈಗಾಗಲೇ ಹಲವು ದೇಶಗಳಲ್ಲಿ ಕೊರೊನಾ ಮೂರನೇ ಅಲೆಯ ಪರಿಣಾಮ ಉಂಟಾಗಿದೆ. ಎರಡನೇ ಅಲೆಯ ಸಂದರ್ಭದಲ್ಲಿ ಭಾರತದ ಜನತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಸೋಂಕಿನಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಚೀನಾ, ಜರ್ಮನಿ, ನೆದರ್ಲ್ಯಾಂಡ್ನಂಥ ದೇಶಗಳು ಭಾಗಶಃ ಲಾಕ್ಡೌನ್ ವಿಧಿಸಿವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ರ್ಯಾಲಿ, ಸಮಾರಂಭಗಳನ್ನು ನಡೆಸಿ ಜನರನ್ನು ಸಜ್ಜುಗೊಳಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಸಾಮಾಜಿಕ ಅಂತರ, ಕೋವಿಡ್ ನಿಯಮಗಳು ಪಾಲನೆಯಾಗುವುದೇ ಇಲ್ಲ. ಇದನ್ನು ಸರಿಯಾದ ಸಮಯಕ್ಕೆ ತಡೆಯದಿದ್ದರೆ, ಕೊರೊನಾ ಸಾಂಕ್ರಾಮಿಕವು ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಭೀಕರ ಪರಿಣಾಮ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಎಲ್ಲಾ ಜಾತಿ-ಧರ್ಮವನ್ನು ಪ್ರೀತಿಸುವವನೇ ನಿಜವಾದ ಹಿಂದೂ : ಮಧು ಬಂಗಾರಪ್ಪ
ರ್ಯಾಲಿ, ಸಮಾವೇಶಗಳನ್ನು ನಡೆಸದಂತೆ ಸೂಚಿಸಿ. ಚುನಾವಣೆ ಪ್ರಚಾರವನ್ನು ದೂರದರ್ಶನ ಮತ್ತು ಸುದ್ದಿಪತ್ರಿಕೆಗಳ ಮೂಲಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿ. ಸಾಧ್ಯವಾದರೆ ಚುನಾವಣೆಯನ್ನು ಒಂದೆರಡು ತಿಂಗಳು ಮುಂದೂಡಿ ಎಂದು ಚುನಾವಣಾ ಆಯೋಗಕ್ಕೆ ನ್ಯಾಯಾಧೀಶ ಯಾದವ್ ತಿಳಿಸಿದ್ದಾರೆ.