ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾಷಣದ ವೇಳೆ ಸಭಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಒಟ್ಟಿಗೆ ಕೆಮ್ಮುವ ಮೂಲಕ ಅಣಕಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕ್ಲೀನ್ ಗಂಗಾ ಮಿಷನ್ ಹಾಗೂ ದೆಹಲಿಯ ಜಲ ಬೋರ್ಡ್ ಸಹಯೋಗದಲ್ಲಿ ಯಮುನಾ ನದಿ ಸ್ವಚ್ಛಗೊಳಿಸುವ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಅರವಿಂದ್ ಕೇಜ್ರಿವಾಲ್, ಸಚಿವ ನಿತಿನ್ ಗಡ್ಕರಿ, ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಕೇಜ್ರಿವಾಲ್ ಮಾತನಾಡಲು ಆರಂಭಿಸುತ್ತಿದ್ದಂತೆ, ಸಭಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಕೆಮ್ಮುವ ಮೂಲಕ ಅಣಕಿಸಲು ಆರಂಭಿಸಿದರು. ಇದರಿಂದ ಮುಜುಗರಕ್ಕೆ ಒಳಗಾಗದ ಸಿಎಂ ಸುಮ್ಮನಿರಿ ಅಂತ ಮನವಿ ಮಾಡಿಕೊಂಡರೂ ಸಭಿಕರು ಮಾತ್ರ ಒಬ್ಬರ ನಂತರ ಒಬ್ಬರು ಕೆಮ್ಮುತ್ತಲೇ ಇದ್ದರು. ಹೀಗಾಗಿ ವೇದಿಕೆಯ ಮೇಲಿದ್ದ ಗಣ್ಯರತ್ತ ಕೇಜ್ರಿವಾಲ್ ಅವರು ದೃಷ್ಟಿ ಹರಿಸಿದರು.
ಈ ಬೆಳವಣಿಗೆಯಿಂದ ಮಧ್ಯ ಪ್ರವೇಶಿಸಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಮುಖ್ಯಮಂತ್ರಿಗಳ ಭಾಷಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅರವಿಂದ್ ಕೇಜ್ರಿವಾಲ್, ನಿತಿನ್ ಗಡ್ಕರಿ ಅವರು ನಮ್ಮನ್ನು ಪ್ರತಿ ಸ್ಪರ್ಧಿ ಪಕ್ಷ ಅಂತ ಭಾವಿಸಲಿಲ್ಲ. ಆದರೆ ಉಳಿದವರ ಬಗ್ಗೆ ನನಗೆ ಗೊತ್ತಿಲ್ಲ. ಅವರ ಈ ವರ್ತನೆ ನಮ್ಮ ಮೇಲಿರುವ ಪ್ರೀತಿಯನ್ನು ತೋರಿಸುತ್ತಿದೆ. ಬಿಜೆಪಿಯವರು ನನ್ನ ಮೇಲೆ ಇಷ್ಟು ಕಾಳಜಿ ಇಟ್ಟಿದ್ದಾರೆ ಎನ್ನುವುದು ನನಗೆ ತಿಳಿದಿರಲಿಲ್ಲ ಎಂದು ತಿರುಗೇಟು ನೀಡಿದರು.
#WATCH BJP workers troll Delhi CM Arvind Kejriwal, start coughing when he begins to talk. Union Minister Nitin Gadkari intervened and Kejriwal began. pic.twitter.com/tABmZJcreS
— ANI (@ANI) December 28, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv