ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಡುವಿನ ಜಟಾಪಟಿ ಮುಂದುವರಿದಿದ್ದು, ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಶ್ಚಿಮ ಬಂಗಾಳ ಟ್ಯಾಬ್ಲೋ(ಸ್ತಬ್ಧಚಿತ್ರ) ಪ್ರದರ್ಶನ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ರಕ್ಷಣಾ ಸಚಿವಾಲಯಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ತಜ್ಞರ ಸಮಿತಿ ಎರಡು ಬಾರಿ ಟ್ಯಾಬ್ಲೋ ಮಾದರಿಯನ್ನು ಸಲ್ಲಿಕೆ ಮಾಡಿತ್ತು. ಈ ಬಾರಿಯ ಗಣರಾಜ್ಯೋತ್ಸವಕ್ಕೆ 16 ರಾಜ್ಯಗಳಿಂದ 22, ಕೇಂದ್ರಾಡಳಿತ ಪ್ರದೇಶ ಹಾಗೂ 6 ಕೇಂದ್ರ ಸಚಿವಾಲಯಗಳ ಒಟ್ಟು 56 ಟ್ಯಾಬ್ಲೋಗಳು ಪ್ರದರ್ಶನಗೊಳ್ಳಲಿದೆ.
ಪಶ್ಚಿಮ ಬಂಗಾಳ ಸಲ್ಲಿಕೆ ಮಾಡಿದ್ದ ಪ್ರಸ್ತಾಪಗಳನ್ನು 2 ಬಾರಿ ತಜ್ಞರ ಸಮಿತಿ ಸಭೆ ನಡೆಸಿ ಚರ್ಚೆ ನಡೆಸಿದ ಬಳಿಕ ತಿರಸ್ಕರಿಸಿದೆ. ಈ ಸಮಿತಿಯಲ್ಲಿ ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಸಂಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಒಳಗೊಂಡಿರುತ್ತದೆ. ತನ್ನ ನಿರ್ಧಾರವನ್ನು ಮಾಡುವ ಮೊದಲು ಸ್ತಬ್ಧಚಿತ್ರದ ಪರಿಕಲ್ಪನೆ, ವಿನ್ಯಾಸ ಮತ್ತು ದೃಶ್ಯ ಪ್ರಭಾವವನ್ನು ಪರಿಶೀಲನೆ ನಡೆಸುತ್ತದೆ. ಸಮಯದ ಅಭಾವದಿಂದ ಪ್ರಸ್ತಾವನೆಯಲ್ಲಿ ಬಂದಿರುವ ಪರಿಕಲ್ಪನೆಗಳಲ್ಲಿ ಉತ್ತಮವಾಗಿರುವುದನ್ನು ಮಾತ್ರ ಸಮಿತಿ ಆಯ್ಕೆ ಮಾಡುತ್ತದೆ.
ಇತ್ತ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಕೆಲ ನಿರ್ಣಯಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇತ್ತೀಚೆಗಷ್ಟೇ ಸಿಎಂ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಎನ್ಸಿಆರ್ ಹಾಗೂ ಪೌರತ್ವ ಕಾಯ್ದೆಯನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದಿದ್ದರು.