ನವದೆಹಲಿ: ಅರುಣಾಚಲ ಪ್ರದೇಶದಲ್ಲಿ (Arunachal Pradesh) ಭಾರತ (India) -ಚೀನಾ (China) ಗಡಿ ಘರ್ಷಣೆಗೆ ಸಂಬಂಧಿಸಿದಂತೆ ಮುನ್ನಡೆಯ ಬಗ್ಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಸಭೆ ನಡೆಸಿದರು.
ಡಿ. 9ರ ಗಡಿ ಘರ್ಷಣೆಯಿಂದಾಗಿ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹಂತವನ್ನು ಚರ್ಚಿಸಲು ದೇಶದ ಮಿಲಿಟರಿ ಮತ್ತು ರಾಜತಾಂತ್ರಿಕ ನಾಯಕತ್ವವು ಇಂದು ಸಭೆ ಸೇರಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ಈ ಸಭೆ ನಡೆದಿದ್ದು, ಸಭೆಯಲ್ಲಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಆರ್ಮಿ ಚೀಫ್ ಜನರಲ್ ಮನೋಜ್ ಪಾಂಡೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್, ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಭಾಗಿಯಾಗಿದ್ದರು.
ಸಭೆಯಲ್ಲಿ ಘಟನೆಯ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಮುಂದಿನ ನಡೆಯ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಗಡಿಯಲ್ಲಿ ಚೀನಾ ಹಳ್ಳಿ ನಿರ್ಮಾಣ, ಟೆಂಟ್ಗಳ ನಿರ್ಮಾಣ, ಮೂಲ ಸೌಕರ್ಯಗಳ ಅಭಿವೃದ್ಧಿ ಸೇರಿ ಹಲವು ವಿಚಾರಗಳ ಮಾಹಿತಿಗಳ ಬಗ್ಗೆ ಈಗಾಗಲೇ ಸೇನಾ ಉನ್ನತ ಅಧಿಕಾರಗಳ ಜೊತೆಗೆ ರಾಜನಾಥ್ ಸಿಂಗ್ ಸಭೆ ನಡೆಸಿದರು. ಚೀನಾ ಭಾರತ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಚರ್ಚೆಗೆ ಅವಕಾಶ ಕೋರಿ ಈಗಾಗಲೇ ಲೋಕಸಭೆ ಸ್ವೀಕರ್ ಮತ್ತು ರಾಜ್ಯಸಭೆ ಸಭಾಧ್ಯಕ್ಷರಿಗೆ ವಿಪಕ್ಷಗಳು ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಹಾಗೂ ಪೀಯುಷ್ ಗೋಯಲ್ ಸ್ಪಷ್ಟನೆ ನೀಡಿದ್ದಾರೆ.
ಗಲ್ವಾನ್ನಲ್ಲಿ ಭಾರತೀಯ ಯೋಧರಿಂದ ಪೆಟ್ಟು ತಿಂದಿದ್ದ ಚೀನಾ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿದೆ. ಅರುಣಾಚಲ ಪ್ರದೇಶದ ಗಡಿ ವಾಸ್ತವ ರೇಖೆ ಬಳಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಬಡಿದಾಟ ನಡೆದಿದೆ. ತವಾಂಗ್ ಸೆಕ್ಟರ್ನಲ್ಲಿ ಡಿಸೆಂಬರ್ 9ರ ಬೆಳಗ್ಗೆ ಗಡಿ ಕಾಯುತ್ತಿದ್ದ ಭಾರತ ಸೈನಿಕರನ್ನು ಚೀನಿ ಯೋಧರು ಕೆಣಕಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಸೈನಿಕರು ತಿರುಗೇಟು ನೀಡಿದ್ದು, ಎರಡು ಕಡೆ ಸೈನಿಕರ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಎರಡು ಕಡೆಯಲ್ಲೂ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಒಕ್ಕಲಿಗ ಪ್ಲೇ ಕಾರ್ಡ್
ಘಟನೆಗೆ ಸಂಬಂಧಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ಈ ವಿಷಯವನ್ನು ಚರ್ಚಿಸುವ ಮೂಲಕ ಸರ್ಕಾರವು ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದೆ. ಘಟನೆಗೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಈ ಕುರಿತು ಚರ್ಚೆ ನಡೆಸುವಂತೆ ನೋಟಿಸ್ ಸಲ್ಲಿಸಿದೆ. ಇದಕ್ಕೆ ಕೇಂದ್ರವು ಪ್ರತಿಕ್ರಿಯಿಸಿದ್ದು, ಯಾವುದೇ ಚರ್ಚೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿವೆ. ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಬಡಿದಾಟ – ಚೀನಿ ಯೋಧರಿಗೆ ತಿರುಗೇಟು ಕೊಟ್ಟ ಭಾರತ