ಮುಂಬೈ: ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಭಾರತೀಯ ಸಿನಿಮಾ ರಂಗದಲ್ಲಿಯೇ ತಮ್ಮದೇ ಚಾಪು ಮೂಡಿಸಿದ್ದಾರೆ. ಬಾಲಿವುಡ್ ಪ್ರವೇಶಿಸಿದ 10 ವಷಗಳಲ್ಲಿಯೇ ನಂಬರ್ ಒನ್ ಪಟ್ಟವನ್ನು ಪಡೆಯುವ ಮೂಲಕ ಅತಿ ಹೆಚ್ಚು ಸಂಭಾವನೆಯ ನಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಆದರೆ ದೀಪಿಕಾ ಸಹ ಸಿನಿ ಜೀವನದ ಆರಂಭದಲ್ಲಿ ಎದುರಿಸಿದ ಕಷ್ಟ ದಿನಗಳನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡುತ್ತಿದ್ದಾಗ ದೀಪಿಕಾ, 10 ವರ್ಷಗಳ ಹಿಂದೆ ಚಿತ್ರಕ್ಕಾಗಿ ಆಡಿಷನ್ ನೀಡುವ ವೇಳೆ ಹಲವರು ನನಗೆ ಸ್ತನಗಳ ಗಾತ್ರ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಸೌಂದರ್ಯವಾಗಿ ಕಾಣುವುದಕ್ಕಾಗಿ ಸ್ತನಗಳ ಪಾತ್ರವೂ ಮುಖ್ಯ ಎಂದು ಹೇಳುತ್ತಿದ್ದರು. ಆದರೂ ನಾನು ಕಲೆಯನ್ನು ನಂಬಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವಳು. ಇಂದು ನನ್ನ ಛಲ ಮತ್ತು ಪರಿಶ್ರಮದಿಂದ ಈ ಸ್ಥಾನದಲ್ಲಿದ್ದೇನೆ ಅಂತಾ ಹೆಮ್ಮೆಪಟ್ಟರು.
ಓಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ದೀಪಿಕಾ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಕಲಾತ್ಮಕ, ಭಾವನಾತ್ಮಕ, ಐತಿಹಾಸಿಕ ಚಿತ್ರಗಳಲ್ಲಿಯೂ ನಟಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದು, ನಿರ್ದೇಶಕರ ನೆಚ್ಚಿನ ನಟಿಯಾಗಿದ್ದಾರೆ. ಈ ವರ್ಷ ತೆರೆಕಂಡಿದ್ದ ಪದ್ಮಾವತ್ ಸಿನಿಮಾ ಸಹ ಹಲವು ದಾಖಲೆಗಳನ್ನು ಬರೆದಿದೆ.
ಪದ್ಮಾವತ್ ಬಳಿಕ ವಿಶಾಲ್ ಭಾರಧ್ವಜ್ ನಿರ್ಮಾಣದಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದು, ನಟ ಇರ್ಫಾನ್ ಖಾನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿದೆ. ಇನ್ನು ಇದೇ ವರ್ಷ ದೀಪಿಕಾ ತಮ್ಮ ಬಹುದಿನಗಳ ಗೆಳೆಯ ರಣ್ವೀರ್ ಸಿಂಗ್ ಜೊತೆ ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.