ದೋಹಾ: ಕತಾರ್ನಲ್ಲಿ (Qatar) 1 ವರ್ಷಕ್ಕೂ ಹೆಚ್ಚು ಕಾಲ ಬಂಧಿತರಾಗಿರುವ 8 ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ (Former Navy Personnel) ಗುರುವಾರ ಕತಾರ್ನ ನ್ಯಾಯಾಲಯ ಮರಣದಂಡನೆ (Death Penalty) ವಿಧಿಸಿದೆ. ಈ ತೀರ್ಪಿಗೆ ಭಾರತ (India) ತೀವ್ರ ಆಘಾತ ವ್ಯಕ್ತಪಡಿಸಿದೆ ಮತ್ತು ಸಾಧ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ಅನ್ವೇಷಿಸುತ್ತಿರುವುದಾಗಿ ಹೇಳಿದೆ.
ನಾವು ಮರಣದಂಡನೆಯ ತೀರ್ಪಿನಿಂದ ತೀವ್ರ ಆಘಾತಕ್ಕೊಳಗಾಗಿದ್ದೇವೆ ಮತ್ತು ವಿವರವಾದ ತೀರ್ಪಿಗಾಗಿ ಕಾಯುತ್ತಿದ್ದೇವೆ. ನಾವು ಅವರ ಕುಟುಂಬ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ. ಸಾಧ್ಯವಿರುವ ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ನಾವು ಈ ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ ಮತ್ತು ಅದನ್ನು ನಿಕಟವಾಗಿ ಅನುಸರಿಸುತ್ತಿದ್ದೇವೆ. ನಾವು ಎಲ್ಲಾ ಕಾನೂನು ಸಹಾಯವನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದೆ. ಆದರೂ ಎಂಇಎ ತನ್ನ ಹೇಳಿಕೆಯಲ್ಲಿ ಪ್ರಕ್ರಿಯೆಗಳ ಗೌಪ್ಯ ಸ್ವರೂಪವನ್ನು ಒಪ್ಪಿಕೊಂಡಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಇದನ್ನೂ ಓದಿ: 2036ರ ಜಾಗತಿಕ ಕ್ರೀಡಾಹಬ್ಬಕ್ಕೆ ಭಾರತ ತಯಾರಿ ಶುರು – ಮುಂದಿರುವ ಸವಾಲುಗಳೇನು?
ಏನಿದು ಪ್ರಕರಣ?
ಕಳೆದ ವರ್ಷ ಆಗಸ್ಟ್ನಲ್ಲಿ ಕತಾರ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 8 ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಯನ್ನು ಇಸ್ರೇಲ್ಗೆ ಗೂಢಾಚಾರ ಕೆಲಸ ಮಾಡುತ್ತಿದ್ದ ಶಂಕೆಯ ಮೇಲೆ ಬಂಧಿಸಲಾಗಿತ್ತು. ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಾದ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಅವರನ್ನು 2022ರ ಆಗಸ್ಟ್ 30 ರಂದು ಕತಾರ್ನ ಗುಪ್ತಚರ ಸಂಸ್ಥೆ ದೋಹಾದಿಂದ ಬಂಧಿಸಿತ್ತು.
ಬಂಧಿತ ಮಾಜಿ ನೌಕಾಪಡೆ ಸಿಬ್ಬಂದಿಯ ಜಾಮೀನು ಅರ್ಜಿಗಳನ್ನು ಕತಾರ್ ಅಧಿಕಾರಿಗಳು ಹಲವಾರು ಬಾರಿ ತಿರಸ್ಕರಿಸಿದ್ದರು. ಈ ಹಿಂದಿನ ದಿನಗಳಲ್ಲಿ ಕತಾರ್ನ ಪ್ರಥಮ ನಿದರ್ಶನದ ನ್ಯಾಯಾಲಯವು ಮರಣದಂಡನೆಯನ್ನು ಘೋಷಿಸಿತು. ಮಾಧ್ಯಮ ವರದಿಗಳ ಪ್ರಕಾರ ಬಂಧಿತರು ಇಸ್ರೇಲ್ ಪರವಾಗಿ ಜಲಾಂತರ್ಗಾಮಿ ವಿಷಯಕ್ಕೆ ಸಂಬಂಧಿಸಿದ ಬೇಹುಗಾರಿಕೆಯ ಆರೋಪಗಳನ್ನು ಎದುರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕತಾರ್ ಅಧಿಕಾರಿಗಳು ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ ಪುರಾವೆಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯಕ್ಕೆ ಮೂಲ ಗೊತ್ತಿಲ್ಲ – ಆಪ್ ಸಚಿವೆ ವಿವಾದಾತ್ಮಕ ಹೇಳಿಕೆ
Web Stories