ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲೊಂದು ಡೆಡ್ಲಿ ಸ್ಪಾಟ್ ಇದೆ. ಈ ಮಾರ್ಗದಲ್ಲಿ ಪ್ರಯಾಣಿಸುವವರು ಕೊಂಚ ಯಾಮಾರಿದರೂ ಪ್ರಾಣಾಪಾಯ ಕಟ್ಟಿಟ್ಟಬುತ್ತಿ.
ಹೌದು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡು ರಾಯರಪಾಳ್ಯ ಗ್ರಾಮವಿದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಇಲ್ಲಿನ ಬಸ್ ನಿಲ್ದಾಣದ ಬಳಿ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇವೆ. ಆದ್ದರಿಂದ ನೆಲಮಂಗಲ ಮುಖಾಂತರ ತುಮಕೂರಿಗೆ ಪ್ರಯಾಣಿಸುವ ಈ ರಸ್ತೆಯಲ್ಲಿ ಸಂಚರಿಸುವಾಗ ಪ್ರಯಾಣಿಕರು ಜೀವವನ್ನ ಕೈಯಲ್ಲಿ ಹಿಡಿದು ಚಲಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ನಡೆದ ಕೆಲವು ಡೆಡ್ಲಿ ಆಕ್ಸಿಡೆಂಟ್ಸ್ ಗಳು ಡಾಬಾವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನ ನೋಡಿದರೆ ಒಮ್ಮೆ ಎದೆ ಝಲ್ ಎನ್ನಿಸುತ್ತದೆ. ಅಲ್ಲದೆ ಇಲ್ಲಿನ ಗ್ರಾಮಸ್ಥರು ಪ್ರತಿದಿನ ಅಪಘಾತಗಳನ್ನು ನೋಡಿ ನೋಡಿ ಬೇಸರವಾಗಿದ್ದಾರೆ. ಒಂದೇ ಸ್ಥಳದಲ್ಲಿ ಹಲವಾರು ಅಪಘಾತಗಳಗಿದ್ದು, ಹಲವರು ಸಾವನ್ನಪ್ಪಿದ್ದರೇ, ಕೆಲವರು ಗಾಯಾಳುಗಳಾಗಿ ಈಗಲೂ ತಮ್ಮ ಜೀವನವನ್ನು ಕಷ್ಟದಲ್ಲೇ ಕಳೆಯುತ್ತಿದ್ದಾರೆ.
ರಾಯರಪಾಳ್ಯ ಗ್ರಾಮದ ಬಸ್ ನಿಲ್ದಾಣದ ಬಳಿಯೇ ರಸ್ತೆ ತಿರುವು ಇರುವುದರಿಂದ ಇಲ್ಲಿ ವಾಹನಗಳು ರಸ್ತೆ ದಾಟುವಾಗ ಅಥವಾ ವಾಹನವನ್ನು ತಿರುಗುಸಿಕೊಂಡು ಹೋಗುವಾಗ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಸ್ಥಳೀಯರು ಸೂಕ್ತವಾದ ಅಂಡರ್ಪಾಸ್ ಅಥವಾ ಸ್ಕೈ ವಾಕರ್ ಗಳನ್ನು ನಿರ್ಮಾಣ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.