ಚಿತ್ರದುರ್ಗ: ಸಂಚಾರ ನಿಯಮ ಉಲ್ಲಂಘಿಸಿ ಹಣ ಕಟ್ಟಲಾಗದೇ ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದ್ದ ಚಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣ ಹೊಳಲ್ಕೆರೆ (Holalkere) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಾವಣಗೆರೆಯ (Davanagere) ಜಗಳೂರಿನ ಬಸವಂತ್ ಕುಮಾರ್ (37) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಈತ ಹೊಳಲ್ಕೆರೆಯ ಕಣಿವೆ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ಎಂಬ ಆರೋಪದಡಿ ಲಾರಿಯನ್ನು ಪೊಲೀಸರು ತಡೆದಿದ್ದರು. ಬಳಿಕ ದಂಡ ಕಟ್ಟಲು ಹಣ ಇಲ್ಲದ ಕಾರಣ ಪೊಲೀಸರು ಲಾರಿಯನ್ನು ಠಾಣೆಗೆ ತಂದಿದ್ದರು. ಹಣ ಕಟ್ಟಲಾಗದೆ ಚಾಲಕ ರಾತ್ರಿ ಪೂರ್ತಿ ಠಾಣೆಯ ಮುಂಭಾಗದಲ್ಲಿ ಕಳೆದಿದ್ದ. ಇದನ್ನೂ ಓದಿ: ಜಿಹಾದಿ ಮನಸ್ಥಿತಿಗಳು ನಮ್ಮ ಮನೆಗೆ ಬಂದ್ರೆ, ಕೋವಿ ಹೊರಬರುತ್ತೆ ಎಂದಿದ್ದ VHP ಮುಖಂಡನ ವಿರುದ್ಧ ಕೇಸ್
ಮರುದಿನ ಬೆಳಗ್ಗೆ ಬಸವಂತ್ ಕುಮಾರ್ ಲಾರಿಯನ್ನು ಅಲ್ಲಿಯೇ ಬಿಟ್ಟು ತೆರಳಿದ್ದ. ಬಳಿಕ 25 ದಿನಗಳಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಆತನ ಪೋಷಕರು ಪೊಲೀಸ್ ಠಾಣೆ ಹಾಗೂ ಎಸ್ಪಿ ಕಚೇರಿ ಬಳಿ ಆತನನ್ನು ಹುಡುಕಿಕೊಡುವಂತೆ ಪ್ರತಿಭಟಿಸಿದ್ದರು. ಅಲ್ಲದೇ ಪೊಲೀಸರನ್ನೇ ಅನುಮಾನಿಸಿದ್ದರು. ಈಗ ಹೊಳೆಲ್ಕೆರೆ ಸ್ಮಶಾನದ ಬಳಿ ಆತನ ಮೃತದೇಹ ನೇಣು ಬಿಗಿದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತೀವ್ರ ಮದ್ಯಪಾನದಿಂದಾಗಿ ಆತನ ಲಿವರ್ ಡ್ಯಾಮೇಜ್ ಆಗಿದ್ದು, ಅನಾರೋಗ್ಯಕ್ಕೊಳಗಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ
Web Stories