ಮಂಗಳೂರು: ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಮಂಗಳೂರು ಸಮೀಪದ ಸುರತ್ಕಲ್ ದೊಡ್ಡಕೊಪ್ಲ ಕಡಲ ತೀರದಲ್ಲಿ ಪತ್ತೆಯಾಗಿದೆ.
ಬೆಳಗ್ಗಿನ ವಾಯುವಿಹಾರಕ್ಕೆ ಸಮುದ್ರದ ದಡಕ್ಕೆ ಹೋದ ವಿಹಾರಿಗಳಿಗೆ ಮೃತ ತಿಮಿಂಗಿಲದ ದರ್ಶನವಾಗಿದೆ. ಅರಬ್ಬೀ ಸಮುದ್ರದ ಕಡಲಿನಲ್ಲಿ ಗಜ ಗಾತ್ರದ ತಿಮಿಂಗಿಲಗಳಿದ್ದರೂ ಬಹಳ ವಿರಳವಾಗಿ ಕಾಣಸಿಗುತ್ತದೆ.
ಈ ತಿಮಿಂಗಿಲ ಮೃತಪಟ್ಟು ಕೆಲ ದಿನಗಳ ಬಳಿಕ ಸಮುದ್ರದ ದಡ ಸೇರಿದೆ. ತಿಮಿಂಗಿಲವನ್ನ ನೋಡಲು ಜನ ತಂಡೋಪತಂಡವಾಗಿ ತೀರಕ್ಕೆ ಬಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮೃತದೇಹ ಕೊಳೆತು ನಾರುತ್ತಿದ್ದು ಮಹಾನಗರ ಪಾಲಿಕೆ ಮಣ್ಣು ಮಾಡಲಿದೆ.
ಒಂದು ತಿಂಗಳ ಬಳಿಕ ಪಣಂಬೂರು ಬೀಚ್ ಅಭಿವೃದ್ಧಿ ಮಂಡಳಿ ತಿಮಿಂಗಿಲದ ಅಸ್ಥಿಪಂಜರವನ್ನು ಹೊರ ತೆಗೆದು ವಸ್ತು ಸಂಗ್ರಹಾಲಯಕ್ಕೆ ನೀಡಲು ತೀರ್ಮಾನಿಸಿದೆ.