ಬೆಂಗಳೂರು: ಡಿಸಿಪಿ ರವಿ ಚನ್ನಣ್ಣನವರ್ ಅವರು ನವರಸನಾಯಕ ಜಗ್ಗೇಶ್ ಅವರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಅವರು ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಅಂಧ ದಂಪತಿಯ ಮಗುವನ್ನು ಅಪಹರಣ ಮಾಡಲಾಗಿತ್ತು. ಈಗ ಆ ಮಗು ಪತ್ತೆಯಾಗಿದ್ದು, ಈ ಬಗ್ಗೆ ನಟ ಜಗ್ಗೇಶ್ ತಮ್ಮ ಟ್ವೀಟ್ ಮಾಡಿದ್ದಾರೆ. ಜಗ್ಗೇಶ್ ಅವರು, “ರಾಯರಿಗೆ ಅಂಗಲಾಚಿ ಅಮಾಯಕ ದಂಪತಿ ಕಳೆದುಕೊಂಡ ಮಗುವಿನ ಪತ್ತೆಗಾಗಿ ಹುಚ್ಚನಂತೆ ಪ್ರಾರ್ಥಿಸಿದ್ದೆ. ನಲ್ಮೆಯ ಅಧಿಕಾರಿ ಡಿಸಿಪಿ ರವಿಚನ್ನಣ್ಣನವರ್ ಮಗು ಸಿಕ್ಕಿದ ಸಿಹಿ ಸುದ್ದಿ ನೀಡಿದರು ಧನ್ಯವಾದಗಳು. ಅಲ್ಲದೆ ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಹಾಯ ಮಾಡೋ ನೆಪದಲ್ಲಿ ಅಂಧ ದಂಪತಿಯ ಮಗುವನ್ನು ಕಿಡ್ನಾಪ್ಗೈದ ಮಹಿಳೆ
ಈ ಮೊದಲು ಜಗ್ಗೇಶ್ ಅವರು, ಮಾನ್ಯ ಅಧಿಕಾರಿ ಬಂಧುಗಳೆ ಈ ವಿದ್ರಾವಕ ಘಟನೆ ನನಗೆ ಕಣ್ಣೀರು ತರಿಸಿತು. ತಮ್ಮಲ್ಲಿ ನನ್ನ ಕಳಕಳಿ ಮನವಿ ಆ ಮಗು ಪತ್ತೆ ಮಾಡಿ ಅಂದ ದಂಪತಿಗೆ ಕಂದಮ್ಮ ಸಿಗುವಂತೆ ಮಾಡಿ. ಮಕ್ಕಳ ಕಳ್ಳರಿಗೆ ತಕ್ಕ ಪಾಠ ಕಲಿಸಿ. ಕಣ್ಣಿಲ್ಲದ ಅಮಾಯಕರ ಮಕ್ಕಳು ಕದಿಯುವಂತ ರಾಕ್ಷಸರ ಕಾನೂನಿನ ಕ್ರಮಕ್ಕೆ ನನ್ನ ಪ್ರಾರ್ಥನೆ ಎಂದು ಟ್ವೀಟ್ ಮಾಡಿದ್ದರು.
ಏನಿದು ಘಟನೆ?
ಮಗುವಿಗೆ ನೀರು ಕುಡಿಸಲು ಸಹಾಯ ಮಾಡುವಂತೆ ಅಂಧ ದಂಪತಿಯ ಸಹಾಯಕ್ಕೆ ಬಂದ ಮಹಿಳೆ ಮಗುವಿನೊಂದಿಗೆ ಪರಾರಿಯಾಗಿರುವ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿತ್ತು. ರಾಯಚೂರು ಮೂಲದ ಅಂಧ ದಂಪತಿಯಾದ ಚಿನ್ನು ಮತ್ತು ಬಸವರಾಜು ಅವರ ಮಗುವನ್ನು ಶನಿವಾರ ಬೆಳಗ್ಗೆ ಅಪಹರಣವಾಗಿತ್ತು. ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ದಂಪತಿ ತಮ್ಮ 8 ತಿಂಗಳ ಮಗುವಿಗೆ ನೀರು ಕುಡಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅನಾಮಿಕ ಮಹಿಳೆ ಸಹಾಯ ನೆಪದಲ್ಲಿ ಧಾವಿಸಿದ್ದು, ಮಗುವಿನೊಂದಿಗೆ ಎಸ್ಕೇಪ್ ಆಗಿದ್ದಳು.
ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದ್ದು, ಈಗ ಮಗು ಪತ್ತೆಯಾಗಿದೆ.