ತುಮಕೂರು: ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಗಿಯಲಿದ್ದು, ಸರ್ಕಾರದ ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಉಪಮುಖ್ಯಂತ್ರಿ ಪರಮೇಶ್ವರ್ ಅವರು ಹೇಳಿದ್ದಾರೆ.
ಸ್ವಕ್ಷೇತ್ರ ಕೊರಟಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಯಾರಿಗೆ ಎಷ್ಟು ಖಾತೆ ಎಂಬುದು ತೀರ್ಮಾನ ಆಗಿದೆ. ಪಕ್ಷದ ವರಿಷ್ಠರು ಮುಂದಿ ರಾಜಕೀಯ ಬೆಳವಣಿಗೆ ನೋಡಿ ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಒಬ್ಬರಿಗೆ ಒಂದೇ ಸ್ಥಾನ ನಿಯಮವಿದ್ದು, ಹಾಗೆಯೇ ಇನ್ನು ಮುಂದೆಯೂ ನಡೆಯುತ್ತದೆ ಎಂದರು.
ಈ ಹಿಂದೆ ಸರ್ಕಾರದಲ್ಲಿ ಗೃಹಸಚಿವ ಸ್ಥಾನ ಪಡೆದಿದ್ದೆ ಆ ವೇಳೆ ಪಕ್ಷದ ಜವಾಬ್ದಾರಿ ನೀಡಲಾಯಿತು. ಈಗಲೂ ಪಕ್ಷದ ವರಿಷ್ಠರು ಯಾವ ಜವಾಬ್ದಾರಿಯನ್ನ ಕೊಟ್ಟರು ನಿಭಾಯಿಸುತ್ತೇನೆ. ಅಲ್ಲದೇ ನಮ್ಮ ಸರ್ಕಾರದ ಅವಧಿಯಲ್ಲಿ ನಿಗಧಿಯಾಗಿರುವ ಎಲ್ಲಾ ಯೋಜನೆಗಳು ಮೈತ್ರಿ ಸರಕಾರದಲ್ಲೂ ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೇ ರೈತರ ಸಾಲ ಮನ್ನಾ ಕುರಿತು ಪ್ರತಿಕ್ರಿಯೆ ನೀಡಿ, ಸಾಲ ಮನ್ನಾ ವಿಚಾರದಲ್ಲಿ ಎರಡೂ ಪಕ್ಷಗಳಲ್ಲಿ ಯಾವುದೇ ಗೊಂದಲ ಇಲ್ಲ. ಮನ್ನಾ ಅಂದರೆ ಎಲ್ಲವನ್ನೂ ಮನ್ನಾ ಮಾಡಲು ಸಾಧ್ಯವಿಲ್ಲ. ಬೆಳೆ ಸಾಲ, ಒಡವೆ ಸಾಲ, ಮದುವೆ ಸಾಲ, ಬೇರೆ ಬೇರೆ ರೀತಿ ವರ್ಗಗಗಳಿದೆ. ಹೀಗಾಗಿ ಸಾಲ ಮನ್ನಾ ರೈತನಿಗೆ ನೇರವಾಗಿ ಸಿಗುವ ಹಾಗೇ ಮಾಡಲಾಗುವುದು ಎಂದರು.