ಬೆಂಗಳೂರು: ಗಣ್ಯ ವ್ಯಕ್ತಿಗಳ ಸಂಚಾರ ಸಂದರ್ಭದಲ್ಲೂ ಅಂಬುಲೆನ್ಸ್ ಗೆ ಮೊದಲ ಆದ್ಯತೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆದೇಶಿಸಿದ್ದಾರೆ.
ಈ ಬಗ್ಗೆ ಪರಮೇಶ್ವರ್ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆಸಿದ್ದಾರೆ. ಈ ಹಿಂದೆ ಪರಮೇಶ್ವರ್ ಪ್ರಯಾಣದ ಸಂದರ್ಭದಲ್ಲಿ ಶಿಷ್ಟಾಚಾರಕ್ಕಾಗಿ ಅಂಬುಲೆನ್ಸ್ ತಡೆದಿರುವ ಹಿನ್ನೆಲೆಯಲ್ಲಿ ಈಗ ಈ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?:
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾನು ಸಂಚರಿಸುವ ಮಾರ್ಗಗಳಲ್ಲಿ ನನಗೆ ಶಿಷ್ಟಾಚಾರದಂತೆ ಟ್ರಾಫಿಕ್ ಫ್ರೀ ಸಂಚಾರ ಮಾಡುವ ಸಲುವಾಗಿ ಕೆಲವು ಬಾರಿ ಅಂಬುಲೆನ್ಸ್ ವಾಹನಗಳನ್ನು ತಡೆದು ನಿಲ್ಲಿಸಿರುವುದನ್ನು ನಾನು ಗಮನಿಸಿರುತ್ತೇನೆ ನನಗೆ ಮತ್ತು ಇನ್ನಿತರ ವಿಐಪಿಗಳಿಗೆ ನೀಡಿರುವ ಶಿಷ್ಟಾಚಾರವನ್ನು ಬದಿಗೊತ್ತಿ, ಗಣ್ಯವ್ಯಕ್ತಿಗಳು ಸಂಚಾರದ ಸಂದರ್ಭದಲ್ಲಿ ಅಂಬುಲೆನ್ಸ್ ವಾಹನಗಳು ಮುಕ್ತವಾಗಿ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯಕ್ರಮ ವಹಿಸಲು ಸೂಚಿಸಿದೆ.