ಬೆಂಗಳೂರು: ಸಮ್ಮಿಶ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಟೇಕಾಫ್ ಆಗಿಲ್ಲ ಎಂಬ ಕಾಂಗ್ರೆಸ್ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ಡಿಸಿಎಂ ಪರಮೇಶ್ವರ್ ತಿರುಗೇಟು ನೀಡಿದ್ದು, ಈ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅದಕ್ಕೆಲ್ಲ ಉತ್ತರ ನೀಡಬೇಕಿಲ್ಲ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಆರು ತಿಂಗಳಿಂದ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಒಂದು ವೇಳೆ ಟೇಕಾಫ್ ಆಗಿಲ್ಲ ಎಂದು ಅನಿಸಿದರೆ ಅವರು ನಮ್ಮ ಬಳಿ ಬಂದು ಹೇಳಬಹುದು. ಸತೀಶ್ ಜಾರಕಿಹೊಳಿ ಅವರಿಗೆ ಏಕೆ ಹಾಗೇ ಅನ್ನಿಸಿದೆ ಎಂದು ಗೊತ್ತಿಲ್ಲ. ವೈಯಕ್ತಿಕ ಕೆಲಸ ತೊಂದರೆ ಆಗಿದ್ದರೆ ಅಥವಾ ಕ್ಷೇತ್ರದ ಕೆಲಸ ಆಗಿಲ್ಲ ಅಂದರೆ ನಮ್ಮ ಬಳಿ ಬಂದು ಮಾತನಾಡಲಿ ಎಂದು ತಿಳಿಸಿದರು.
ಬೆಳಗಾವಿ ಅಧಿವೇಶಕ್ಕೆ ಕಾಂಗ್ರೆಸ್ ಶಾಸಕರ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಯಾವುದೇ ಮಾಹಿತಿ ನನಗೆ ಲಭಿಸಿಲ್ಲ. ಪಕ್ಷದ ಶಾಸಕರು ಕೂಡ ಬಗ್ಗೆ ತಿಳಿಸಿಲ್ಲ. ಒಂದೊಮ್ಮೆ ಪಕ್ಷದ ಅಧ್ಯಕ್ಷರಿಗೆ ಹೇಳಿದ್ದರೋ ಗೊತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು, ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡಬೇಕು ಎಂಬ ಬಗ್ಗೆಯೂ ತಿಳಿಸಿದ್ದಾಗಿ ಹೇಳಿದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸಮ್ಮಿಶ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಟೇಕಾಫ್ ಆಗಿಲ್ಲ, ಕೆಲ ಇಲಾಖೆಗಳು ಮಾತ್ರ ಕೆಲಸ ಮಾಡುತ್ತಿದ್ದು. ಪೂರ್ಣ ಪ್ರಮಾಣದಲ್ಲಿ ಟೇಕಾಫ್ ಆಗಲು ಮತ್ತಷ್ಟು ಸಮಯ ಬೇಕಿದೆ. ಪಕ್ಷದ ಕೆಲ ಶಾಸಕರಲ್ಲಿ ಅಸಮಾಧಾನವಿದ್ದು, ಎಲ್ಲಾ ಸರ್ಕಾರದ ವೇಳೆಯಲ್ಲೂ ಶಾಸಕರು ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯ. ಸಿದ್ದರಾಮಯ್ಯ ಅವರು ಕೂಡ ಸಿಎಂ ಆಗಿದ್ದಾಗ ಈ ಸಮಸ್ಯೆ ಇತ್ತು. ಆದರೆ ಏನೇ ಸಮಸ್ಯೆಗಳಿದ್ದರೂ ಪಕ್ಷದ ಆಂತರಿಕ ಸಭೆಯಲ್ಲಿ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv