ಬೆಂಗಳೂರು: ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಇಂದು ವಿಧಾನಸೌಧದಲ್ಲಿ ವಾಸ್ತು ಶಾಸ್ತ್ರ ಪೂಜೆ ಸಲ್ಲಿಸಿದ್ರು.
ವಿಧಾನಸೌಧ 3ನೇ ಮಹಡಿಯ ಕೊಠಡಿ ಸಂಖ್ಯೆ 327, 328ರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಕನ್ನಿಕ ನೇತೃತ್ವದಲ್ಲಿ ಪರಮೇಶ್ವರ್ ಅವರು ಹೋಮ-ಹವನ ನಡೆಸಿದ್ದಾರೆ.
ಪರಮೇಶ್ವರ್ ಅವರ ವಿಶೇಷ ಪೂಜೆ ಪುನಸ್ಕಾರಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ವಿಧಾನಸೌಧಕ್ಕೆ ಯಾರಿಗೂ ಪ್ರವೇಶ ನೀಡದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಮೊದಲು ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ವಿಧಾನಸೌಧದ ಸಿಎಂ ಕೊಠಡಿಯನ್ನು ವಾಸ್ತು ಪ್ರಕಾರ ಬದಲಿಸಿಕೊಂಡಿದ್ದರು. ಇದನ್ನೂ ಓದಿ: ಸಿಎಂ ಕಚೇರಿ ವಾಸ್ತು ಪ್ರಕಾರ ಬದಲು- ಪೂರ್ವಾಭಿಮುಖವಾಗಿ ಆಸೀನರಾದ ಬಿಎಸ್ವೈ
ಇತ್ತ ಸಂಪುಟ ವಿಸ್ತರಣೆ ಮುನ್ನವೇ ಕಾಂಗ್ರೆಸ್ ನ ಮೊದಲ ವಿಕೆಟ್ ಪತನವಾಗಿದೆ. ಸಿದ್ದರಾಮಯ್ಯ ಪ್ರಭಾವಲಯದಲ್ಲಿದ್ದ ಪ್ರಭಾವಿ ಮುಖಂಡ, ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಎಸ್.ಆರ್ ಪಾಟೀಲ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಎಸ್.ಆರ್ ಪಾಟೀಲ್, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಸಿಗಲಿಲ್ಲ. ಹೀಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ನನಗೆ ಪಕ್ಷದ ವಿರುದ್ಧವಾಗಲಿ, ನಾಯಕರ ವಿರುದ್ಧವಾಗಲಿ ಯಾವುದೇ ಅಸಮಾಧಾನ ಇಲ್ಲ. ಯಾರ ಪ್ರಭಾವಕ್ಕೂ ಒಳಗಾಗಿಲ್ಲ ಅಂದ್ರು.