ಸಂಸದರ ಸಭೆಗೆ ಗೈರು: ಪರಮೇಶ್ವರ್ ದೆಹಲಿ ಪ್ರವಾಸ ದಿಢೀರ್ ರದ್ದು!

Public TV
1 Min Read
G PARAMESHWAR

ಬೆಂಗಳೂರು: ಇಂದು ಸಂಜೆ ನಡೆಯಲಿರುವ ಕಾವೇರಿ ಪ್ರಾಧಿಕಾರ ರಚನೆಗೆ ಸಂಭಂದಿಸಿದಂತೆ ಆಯೋಜನೆಗೊಂಡಿರುವ ಸಂಸದರ ಸಭೆಗೆ ಡಿಸಿಎಂ ಪರಮೇಶ್ವರ್ ಗೈರಾಗಲಿದ್ದಾರೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಸಂಜೆ ರಾಜ್ಯದ ಎಲ್ಲ ಸಂಸದರೊಂದಿಗೆ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ದೆಹಲಿಯ ಕರ್ನಾಟಕ ಭವನದಲ್ಲಿ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಪರಮೇಶ್ವರ್ ಭಾಗಿಯಾಗಬೇಕಿತ್ತು. ಆದರೆ ಈಗ ದಿಢೀರ್ ಆಗಿ ಪರಮೇಶ್ವರ್ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಯಾವ ಕಾರಣಕ್ಕೆ ಪರಮೇಶ್ವರ್ ಗೈರು ಆಗಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಸಂಸದರ ಸಭೆಗೆ ಡಿಸಿಎಂ ಪರಮೇಶ್ವರ್ ಗೆ ಆಹ್ವಾನ ಇರಲಿಲ್ಲವೇ? ಕೊನೆಯ ಕ್ಷಣದವರೆಗೂ ಸಭೆ ಬಗ್ಗೆ ಮಾಹಿತಿ ಕೊಟ್ಟಿರಲಿಲ್ಲವಾ ಎನ್ನುವುದು ಈಗ ಚರ್ಚೆಗೆ ಕಾರಣವಾಗಿದೆ.

ಪರಮೇಶ್ವರ್ ಎರಡು ದಿನದ ಹಿಂದೆ, ಬುಧವಾರ ಸಂಸದರ ಸಭೆ ನಡೆಸಿದ ಬಳಿಕ ಹೈಕಮಾಂಡ್ ಭೇಟಿ ಮಾಡುತ್ತೇವೆ ಎಂದು ಹೇಳಿದ್ದರು. ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮತ್ತು ಸಿಎಂ ಕುಮಾರಸ್ವಾಮಿ ಸರಿಯಾಗಿ ಅಹ್ವಾನ ನೀಡದ ಹಿನ್ನೆಲೆಯಲ್ಲಿ ಸಭೆಯಿಂದ ಅಂತರ ಕಾಯ್ದುಕೊಳ್ಳಲು ಗೈರಾಗುವ ನಿರ್ಧಾರ ಮಾಡಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಮಾಜಿ ಸಿಎಂ ಸಿದ್ದರಾಮಯ್ಯರವರು ಸಮ್ಮಿಶ್ರ ಸರ್ಕಾರದ ವಿರುದ್ಧ ಈ ಹಿಂದೆ ಪರೋಕ್ಷವಾಗಿ ಅಸಮಾಧಾನವನ್ನು ಹೊರಹಾಕಿದ್ದರು. ಈಗ ಸರ್ಕಾರದ ಭಾಗವಾಗಿರುವ ಪರಮೇಶ್ವರ್ ಅವರೇ ಗೈರಾಗಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಎರಡೇ ತಿಂಗಳಿಗೆ ಡಮ್ಮಿಯಾದ್ರಾ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಇಂದು ಸಂಜೆ ಏಳು ಗಂಟೆಗೆ ಕರ್ನಾಟಕ ಭವನದ ಸಭಾಂಗಣದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಹಿನ್ನೆಲೆಯಲ್ಲಿ ರಾಜ್ಯದ ಹಿತಾಸಕ್ತಿ ರಕ್ಷಣೆ ಹೇಗೆ? ಸದ್ಯದಲ್ಲೇ ಹೊರಬೀಳಲಿರುವ ಮಹದಾಯಿ ನ್ಯಾಯಾಧೀಕರಣದ ತೀರ್ಪು ಇನ್ನಿತರ ವಿಚಾರಗಳ ಕುರಿತಂತೆ ಸಂಸದರ ಜೊತೆ ಸಿಎಂ ಮಾತನಾಡಲಿದ್ದಾರೆ. ನೀರಿನ ಬಳಕೆ ಹಾಗೂ ಬೆಳೆ ಪದ್ಧತಿ ಸೇರಿದಂತೆ ಹಲವು ವಿಚಾರದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದೆ. ಪ್ರಾಧಿಕಾರ ಅಸ್ತಿತ್ವಕ್ಕೆ ತಂದಿರುವುದನ್ನ ಸಂಸತ್ತಿನಲ್ಲಿ ಒಕ್ಕೊರಲಿನಿಂದ ಪ್ರಶ್ನಿಸುವಂತೆ ಎಚ್‍ಡಿಕೆ ಸಂಸದರಿಗೆ ಮನವಿ ಮಾಡುವ ಸಾಧ್ಯತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *