ಬೆಳಗಾವಿ: ಅಥಣಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೆ ಭಾರೀ ಅಂತರದ ಗೆಲುವು ಲಭಿಸಿದ್ದು, ಕ್ಷೇತ್ರದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಸಿಎಂ ಬಿಎಸ್ವೈ ನೇತೃತ್ವದ ಸರ್ಕಾರದಲ್ಲಿ ಸ್ಥಿರ ಹಾಗೂ ಅಭಿವೃದ್ಧಿ ಪರ ಆಡಳಿತವನ್ನು ನೀಡುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಹೇಳಿದರು.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಅವರು, ಕ್ಷೇತ್ರದ ಗೆಲುವಿನ ಶ್ರೇಯಸ್ಸನ್ನು ಕ್ಷೇತ್ರದ ಕಾರ್ಯಕರ್ತರಿಗೆ, ಜನತೆಗೆ ನೀಡುತ್ತೇನೆ. ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದಿದೆ. ನಮ್ಮ ಪಕ್ಷ ಹೇಳಿರುವಂತೆ ಅಥಣಿಗೆ ಮೂರು ಸಚಿವ ಸ್ಥಾನ ಲಭಿಸಲಿದ್ದು, ಇದು ಅಥಣಿಯ ಸೌಭಾಗ್ಯ, ಇತಿಹಾಸದಲ್ಲಿ ಬರೆದಿಡುವ ದಿನ ಎಂದರು. ಅಲ್ಲದೇ ಶೀಘ್ರವೇ ಸಂಪುಟ ವಿಸ್ತರಣೆ ಆಗಲಿದ್ದು, ಮೂವರು ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಇದೇ ವೇಳೆ ಶಾಸಕ ಮಹೇಶ್ ಕುಮಟಹಳ್ಳಿ ಮಾತನಾಡಿ, ಜನರು ಆಶೀರ್ವಾದ ಮಾಡಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಲಕ್ಷ್ಮಣ ಸವದಿ ಅವರು 15 ವರ್ಷಗಳ ಕಾಲ ಅಥಣಿಯಲ್ಲಿ ಶಾಸಕರಾಗಿದ್ದರು. ನಾನು ಕೂಡಾ ಇಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರು ನಾನು ನಿಭಾಯಿಸುತ್ತೇನೆ. ಆದರೆ ಸಚಿವ ಸ್ಥಾನ ನೀಡುವುದು ಬಿಡುವುದು ಹೈಮಾಂಡ್ ನಿರ್ಧಾರ ಎಂದರು.
ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಶ್ರೀಮಂತ ಪಾಟೀಲ ಅವರು, ನಾನು 15 ರಿಂದ 20 ಸಾವಿರ ಮತಗಳಿಂದ ಗೆಲ್ಲುತ್ತೆನೆ ಎಂಬ ನಿರೀಕ್ಷೆ ಇತ್ತು. ರಾಜು ಕಾಗೆ ಅವರು 20 ವರ್ಷದಿಂದ ಕ್ಷೇತ್ರದಲ್ಲಿ ಏನು ಮಾಡಲಿಲ್ಲ, ಅವರಿಂದ ಜನರು ಬೇಸರಗೊಂಡಿದ್ದರು. ಸದ್ಯ ಕಾಗವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಬೇಕಾಗಿದೆ. ನನಗೆ ಯಾವ ಸಚಿವ ಸ್ಥಾನ ನೀಡುತ್ತಾರೆ ಗೊತ್ತಿಲ್ಲ. ನನಗೆ ಬೇಕಾದ ಸಚಿವ ಸ್ಥಾನ ಕೇಳುತ್ತೇನೆ. ನನ್ನ ಕ್ಷೇತ್ರದ ಜನರು ಕೃಷಿ ಸಚಿವ ಹಾಗೂ ನೀರಾವರಿ ಸಚಿವರಾಗಿ ಎಂದು ಹೇಳುತ್ತಿದ್ದಾರೆ. ಹೈಕಮಾಂಡ್ ಯಾವ ಸಚಿವ ಸ್ಥಾನ ನೀಡುತ್ತದೆ ಕಾದು ನೋಡುತ್ತೇನೆ ಎಂದರು.