ಬೆಳಗಾವಿ: ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದೇಶಕ್ಕೆ ತೆರಳಿ ಗೈರಾಗಿದ್ದಾರೆ. ಇತ್ತ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಕೂಡ ಜ್ಚರದಿಂದಾಗಿ ಅಧಿವೇಶನದಲ್ಲಿ ಪಾಲ್ಗೊಳಲ್ಲ. ಹೀಗಾಗಿ ಇಂದು ಆರಂಭವಾದ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಏಕಾಂಗಿಯಾಗಿದ್ದಾರೆ.
ಡಿಸಿಎಂ ಪರಮೇಶ್ವರ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಇಂದು ಬೆಳಗ್ಗೆಯೆ ಬೆಳಗಾವಿಗೆ ಆಗಮಿಸಬೇಕಿದ್ದ ಉಪ ಮುಖ್ಯಮಂತ್ರಿ ತೀವ್ರ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಬೆಳಗಾವಿಗೆ ಬರಲು ತೀರ್ಮಾನಿಸಿದ್ದಾರೆ.
ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಲೆ ಸಿದ್ದರಾಮಯ್ಯ ಅವರು ಪುತ್ರ ಯತೀಂದ್ರ ಜೊತೆಗೆ ಇದೇ ಮಂಗಳವಾರ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಡಿಸೆಂಬರ್ 10ರಿಂದ ಆರಂಭವಾಗುವ ಚಳಿಗಾಲ ಅಧಿವೇಶನದ ಮೊದಲ ವಾರು ಗೈರು ಆಗಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಎರಡನೇ ವಾರದ ಅಧಿವೇಶನಕ್ಕೆ ಹಾಜರಾಗಲಿದ್ದಾರೆ. ಡಿಸೆಂಬರ್ 12 ಅಥವಾ 13ರಂದು ನಡೆಯಬೇಕಿದ್ದ ಶಾಸಕಾಂಗ ಸಭೆಯನ್ನು ಮುಂದೂಡುವ ಸಾಧ್ಯತೆಗಳಿವೆ. ಮಾಜಿ ಸಿಎಂ ಆಗಮಿಸಿದ ಬಳಿಕ ಅಂದರೆ ಡಿಸೆಂಬರ್ 18ರಂದು ಸಭೆ ನಡೆಯುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದ್ದವು.
ಬಿಗಿ ಪೊಲೀಸ್ ಭದ್ರತೆ:
ಬೆಳಗಾವಿ ಅಧಿವೇಶನಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುವರ್ಣಸೌಧದ ಸುತ್ತ ಮುತ್ತ 250 ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿದೆ. ಸುವರ್ಣಸೌಧದ ಪ್ರವೇಶ ದ್ವಾರದ 80 ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಸುವರ್ಣಸೌಧದ ಒಳ ಬಿಡಲಾಗುತ್ತಿದೆ. ಬಿಗಿ ಪರಿಶೀಲನೆ ಮಾಡಿದ ಬಳಿಕ ಪ್ರವೇಶಕ್ಕೆ ಅವಕಾಶ ಮಾಡಲಾಗುತ್ತಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಸೂಚನೆಯಂತೆ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಬಾರಿ ಹೆಚ್ಚು ಪ್ರತಿಭಟನೆಗಳಾಗುವ ಹಿನ್ನೆಲೆಯಲ್ಲಿ ನೀಲಮಣಿ ರಾಜು ಅವರು ಈಗಾಗಲೇ ಖುದ್ದು ಮುಖ್ಯಪ್ರದೇಶಗಳಲ್ಲಿ ಬಂದೋಬಸ್ತ್ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸಿಎಂ ಕೂಡ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv