ಬೆಂಗಳೂರು: ಮುಂದೊಂದು ದಿನ ಈ ರಾಜ್ಯದ ಸಿಎಂ ಆಗಲೇ ಬೇಕು ಎಂಬ ಆಕಾಂಕ್ಷೆ ಹೊಂದಿರುವ ಈಗಿನ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ತಮಗೆ ಬಂದೊದಗುವ ಯಾವುದೇ ಅವಕಾಶವನ್ನು ಕೈಚೆಲ್ಲಲು ಸಿದ್ಧರಿಲ್ಲ.
ಹೌದು, ಸಂಕಷ್ಟ ಕಾಲದಲ್ಲಿ ಪಕ್ಷದ ಚುಕ್ಕಾಣಿ ಹಿಡಿಯುವ ಸಂದರ್ಭ ಬಂದಾಗ, ಅದು ಸೂಕ್ತ ಕಾಲವಲ್ಲ ಎಂಬ ಹಿತೈಷಿಗಳ ಕಿವಿಮಾತನ್ನು ಲೆಕ್ಕಿಸದೇ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಡಿಕೆಶಿ ಒಪ್ಪಿಕೊಂಡಿದ್ದರು. ಇದೀಗ ಮುಂದಿನ ಸರದಿಯಲ್ಲಿ ಸಿಎಂ ಗಾದಿ ಖಚಿತ ಎಂಬ ಹೈಕಮಾಂಡ್ (Congress HighCommand) ಭರವಸೆಯಲ್ಲಿ ಡಿಸಿಎಂ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಮುಂದೊಂದು ದಿನ ಗುರಿ ತಲುಪುತ್ತೇನೆ ಎನ್ನುವ ಭರವಸೆಯಲ್ಲಿ ಇದ್ದಾರೆ.
ಈಗ ವಿಷಯ ಏನಪ್ಪಾ ಅಂದ್ರೆ, ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಪೈಕಿ ಮೊದಲನೆಯದ್ದಕ್ಕೆ ನಾಳೆ ಅಧಿಕೃತ ಚಾಲನೆ ನೀಡಲಾಗುತ್ತಿದೆ. ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಕಾರ್ಯಕ್ರಮ ನಾಳೆ ನಡೆಯಲಿದೆ. ನಾಳಿನ ಮುಹೂರ್ತ ನಿಗದಿ ಮಾಡಿದ್ದೇ ಡಿ.ಕೆ ಶಿವಕುಮಾರ್ ಅಂತೆ. ಹೇಳಿ ಕೇಳಿ ಪರಮ ದೈವಭಕ್ತರಾದ ಅವರು, ಶುಭಮುಹೂರ್ತವನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ನಡುವೆ ಅವರು ಚುನಾವಣೆಗೂ ಮುನ್ನ ಹರಕೆ ಹೊತ್ತುಕೊಂಡಂತೆ ಉಜ್ಜೈನಿ (Ujjaini) ಸೇರಿದಂತೆ ಉತ್ತರಭಾರತದ ಕೆಲವು ದೇವಾಲಯ ದರ್ಶನಕ್ಕೆ ಶನಿವಾರ ಹೊರಟು ನಿಂತಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆಗೆ ಭಾನುವಾರ ಚಾಲನೆ- ಬಸ್ ಕಂಡಕ್ಟರ್ ಆಗಲಿದ್ದಾರೆ ಸಿದ್ದರಾಮಯ್ಯ
ಶುಕ್ರವಾರ ನಿಗದಿಯಾದ ಕಾರ್ಯಕ್ರಮದಂತೆ ಅವರು ಭಾನುವಾರ ಸಂಜೆಯ ಹೊತ್ತಿಗೆ ವಾಪಸ್ಸಾಗಬೇಕಿತ್ತು. ಆದರೆ ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ನೂತನ ಸರ್ಕಾರದ ಮಹತ್ವದ ಮೊದಲ ಗ್ಯಾರಂಟಿ ಕಾರ್ಯಕ್ರಮಕ್ಕೆ ಡಿಕೆಶಿ ಗೈರಾಗುತ್ತಿದ್ದಾರಲ್ಲ. ಪಕ್ಷ ಹಾಗೂ ಸರ್ಕಾರದ ಕಾರ್ಯಕ್ಕಿಂತ ದೇವಾಲಯ ದರ್ಶನವೇ ಮುಖ್ಯವಾಯಿತೇ ಎಂದು. ಆದರೆ ಸಿಎಂ ಸಿದ್ದರಾಮಯ್ಯ (Siddaramaiah) ಬಿಡಬೇಕಲ್ಲ. ಏನಪ್ಪಾ ಮುಹೂರ್ತ ನಿಗದಿಪಡಿಸಿ ನೀವೇ ಇಲ್ಲಾಂದ್ರೆ ಹೇಗೇ ಅಂತ ಕೇಳಿದ್ರಂತೆ. ತಕ್ಷಣ ಡಿ.ಕೆ ಶಿವಕುಮಾರ್ ತಮ್ಮ ಮುಂದಿರುವ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಲು ಬಯಸಲಿಲ್ಲ.
ದೇವಾಲಯ ದರ್ಶನ ಕಾರ್ಯಕ್ರಮದಲ್ಲೇ ಸ್ವಲ್ಪ ಬದಲಾವಣೆ ಮಾಡಿ, ನಾಳೆ (ಭಾನುವಾರ) 11 ಗಂಟೆಗೆ ಬೆಂಗಳೂರಿಗೆ ಬರುವಂತೆ ಪ್ಲಾನ್ ಮಾಡಿದ್ದಾರೆ. ಸರ್ಕಾರ ಮೊದಲ ಗ್ಯಾರಂಟಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೀರ್ಮಾನಿಸಿದ್ದಾರೆ. ಅಂದರೆ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಕೆಶಿ, ತಮ್ಮ ಮುಂದೆ ಬರುವ ಯಾವುದೇ ಅವಕಾಶವನ್ನು ಕೈಚೆಲ್ಲುವ ತಪ್ಪನ್ನು ಮಾಡದಿರಲು ನಿರ್ಧರಿಸಿದಂತೆ ಕಾಣುತ್ತೆ. ಸದ್ಯ ಸಂಪುಟದಲ್ಲಿ ಎಲ್ಲರಿಗಿಂತ ಸ್ವಲ್ಪ ಹೆಚ್ಚಾಗಿಯೇ ನುಗ್ಗುತ್ತಿರುವ ಡಿಕೆಶಿವಕುಮಾರ್, ಕೆಲವೊಮ್ಮೆ ಸಿಎಂ ಸಿದ್ದರಾಮಯ್ಯ ಅವರನ್ನೂ ಓವರ್ ಟೇಕ್ ಮಾಡುವುದನನ್ನು ಗಮನಿಸಬಹುದು.