– ಸದೃಢ ಇಲ್ಲದ, ಅನಧಿಕೃತ ಕಟ್ಟಡಗಳ ತೆರವಿಗೆ ಸೂಚನೆ
ಬೆಂಗಳೂರು: ಬಾಬುಸಾಬ್ ಪಾಳ್ಯ ಕಟ್ಟಡ ದುರಂತ (Babusapalya Building Collapse) ಬಳಿಕ ನಗರದ ಕಟ್ಟಡಗಳ ಸಂಬಂಧ ಬಿಬಿಎಂಪಿ (BBMP) ಅಧಿಕಾರಿಗಳಿಗೆ ಡಿಸಿಎಂ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅನಧಿಕೃತ ಕಟ್ಟಡ ತೆರವಿಗೆ ಡಿಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದು, ಸೋಮವಾರದಿಂದಲೇ ಅಧಿಕಾರಿಗಳು ಅಖಾಡಕ್ಕಿಳಿದು ಸರ್ವೆ (Survey) ನಡೆಸಲಿದ್ದಾರೆ.
ಮೂರು ದಿನದ ಹಿಂದೆ ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ದುರಂತ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ನಗರದಲ್ಲಿ ಅನಧಿಕೃತ, ಸದೃಢ ಇಲ್ಲದ ಕಟ್ಟಡಗಳ ಸರ್ವೆಗೆ ಸೂಚಿಸಿದ್ದು, ಸರ್ವೆ ಬಳಿಕ ಮುಲಾಜಿಲ್ಲದೇ ಅಂತಹ ಕಟ್ಟಡಗಳನ್ನು ತೆರವು ಮಾಡುವಂತೆ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಒಡಿಶಾ ತೀರಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ – ಗಂಟೆಗೆ 120 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ
ಬಾಬುಸಾಬ್ ಪಾಳ್ಯ ದುರಂತ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಕೇವಲ ಜನರನ್ನು ಮಾತ್ರ ಅಲ್ಲದೇ ಸದ್ಯ ಈ ಸಂಬಂಧ ಡಿಸಿಎಂ ಹೊರಡಿಸಿರುವ ಆದೇಶ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದವರಿಗೂ ಕೂಡ ನಿದ್ದೆ ಹಾಳು ಮಾಡಿದೆ. ಕಟ್ಟಡ ದುರಂತ ಬಳಿಕ ಎಚ್ಚೆತ್ತಿರುವ ಸರ್ಕಾರ ನಗರದಲ್ಲಿ ಅನಧಿಕೃತವಾಗಿ ನಿರ್ಮಾಣ ಆಗುತ್ತಿರುವ ಕಟ್ಟಡಗಳ ಸರ್ವೆಗೆ ಮುಂದಾಗಿದೆ. ಇದೇ ಸೋಮವಾರದಿಂದ ಬಿಬಿಎಂಪಿ ವಲಯ ಆಯುಕ್ತರ ನೇತೃತ್ವದಲ್ಲಿ ಫೀಲ್ಡಿಗಿಳಿಯಲಿರುವ ಅಧಿಕಾರಿಗಳು ಖುದ್ದು ಸರ್ವೆ ನಡೆಸಿ ಅನಧಿಕೃತ ನಿರ್ಮಾಣ, ಸಡಿಲಗೊಂಡ ಕಟ್ಟಡಗಳು, ಹೊಸ ಕಟ್ಟಡಗಳ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಈ ಮೂಲಕ ನಗರದಲ್ಲಿ ಅಪಾಯದಲ್ಲಿರುವ, ನಿಯಮ ಬಾಹಿರವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನ ತೆರವು ಮಾಡುವ ಮೊದಲ ಹೆಜ್ಜೆ ಆರಂಭವಾಗಲಿದೆ. ಇದನ್ನೂ ಓದಿ: ಐದು ಲಕ್ಷ ಕೋಟಿಯ ಸಾಮ್ರಾಜ್ಯ ಕಟ್ಟುವ ಕನಸಿದೆ: ಬಾಬಾ ರಾಮ್ದೇವ್
ಇನ್ನೂ ಈ ಹಿಂದೆಯೇ ಡ್ರೋಣ್ ಮೂಲಕ ಅನಧಿಕೃತ ಕಟ್ಟಡ, ಹೆಚ್ಚುವರಿ ಅಂತಸ್ತು ನಿರ್ಮಾಣ ಸೇರಿದಂತೆ ನಿಯಮಬಾಹಿರ ನಿರ್ಮಾಣ ಕಟ್ಟಡಗಳ ಸರ್ವೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಖುದ್ದು ಅಧಿಕಾರಿಗಳಿಗೆ ದೈಹಿಕವಾಗಿ ಸರ್ವೆ ನಡೆಸಿ ರಿಪೋರ್ಟ್ ಸಿದ್ಧ ಮಾಡುವಂತೆ ಡಿಸಿಎಂ ಸೂಚಿಸಿದ್ದಾರೆ. ಅದು ಕೂಡ ಒಂದು ವಾರದಲ್ಲೇ ಈ ರಿಪೋರ್ಟ್ ಸಿದ್ಧವಾಗಬೇಕು. ಸಿದ್ಧವಾದ ರಿಪೋರ್ಟ್ ಪರಿಶೀಲನೆಗೊಂಡ ತಕ್ಷಣದಲ್ಲೇ ಅಂತಹ ಕಟ್ಟಡಗಳ ತೆರವು ಮಾಡುವಂತೆ ಡಿಸಿಎಂ ಸೂಚಿಸಿದ್ದಾರೆ. ಇದನ್ನೂ ಓದಿ: ರಸ್ತೆ ಮಧ್ಯೆ ಜೋತಾಡುತ್ತಿದ್ದ ವಿದ್ಯುತ್ ವೈರ್ಗೆ ಇಬ್ಬರು ರೈತರು ಬಲಿ