ಬೆಂಗಳೂರು: ಅಂಕೋಲಾಗೆ ಹೋಗಿರುವ ಹೆಚ್ಡಿಕೆ (H.D Kumaraswamy) ಮಳೆ ಹಾನಿ ಸರಿಪಡಿಸಲು ಎಲ್ಲಿ ಫೀಲ್ಡ್ಗೆ ಇಳಿದಿದ್ದಾರೆ? ಅವರೇನು ಮಿಲಿಟರಿ ತಂದು ಕಾರ್ಯಾಚರಣೆ ಮಾಡಿಸಿದ್ದಾರಾ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಕೋಲಾದ ಶಿರೂರು ಗುಡ್ಡ ಕುಸಿದ (Landslide) ಪ್ರದೇಶಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ ನಿಡಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಕುಮಾರಸ್ವಾಮಿ ಎಲ್ರೀ ಫೀಲ್ಡಿಗಿಳಿದಿದ್ದಾರೆ? ಸೈನಿಕರನ್ನು ಕರೆತಂದು ಫೀಲ್ಡಿಗೆ ಇಳಿಯಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮ್ಮನೆ ಒಂದು ಭೇಟಿ ಮಾಡುವುದಲ್ಲ. ನಾವು ಒಂದೇ ಗಂಟೆಯಲ್ಲಿ ನಮ್ಮ ಸಚಿವರನ್ನ ಕ್ಯಾಬಿನೆಟ್ನಿಂದ ಅಲ್ಲಿಗೆ ಓಡಿಸಿದ್ದೇವೆ. ಕೃಷ್ಣಬೈರೆಗೌಡ, ಮಂಕಾಳ ವೈದ್ಯ ಏನು ಮಾಡಬೇಕೊ ಮಾಡ್ತಿದ್ದಾರೆ. ಹೆಚ್ಡಿಕೆ ಬರಲಿ, ಬೇಡ ಅಂದವರು ಯಾರು? ಈ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ಅವರು ಹೋಗುವುದಕ್ಕೆ ನಾವ್ಯಾಕೆ ಅಡ್ಡಿ ಮಾಡೋಣ ಎಂದಿದ್ದಾರೆ.
ಶಿರೂರು ಗುಡ್ಡ ಕುಸಿದ ಪ್ರದೇಶಕ್ಕೆ ಮಾಧ್ಯಮಗಳು ತೆರಳದಂತೆ ಜಿಲ್ಲಾಡಳಿತ ತಡೆ ನೀಡಿದ್ದ ವಿಚಾರವಾಗಿ ಇಂದು (ಶನಿವಾರ) ಬೆಳಗ್ಗೆ ಜೆಡಿಎಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಕುಮಾರಸ್ವಾಮಿ ಭೇಟಿ ಸುದ್ದಿಯಾಗದಂತೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಜೆಡಿಎಸ್ ಆರೋಪಿಸಿತ್ತು.