ರಾಮನಗರ: ಚನ್ನಪಟ್ಟಣದಲ್ಲಿ (Channapatna) ಕಾಂಗ್ರೆಸ್ ಗೆಲುವಿಗೆ ಎಲ್ಲಾ ಪಾರ್ಟಿಯವರೂ ಸಹಾಯ ಮಾಡಿದ್ದಾರೆ. ಬಿಜೆಪಿ ಅವರೂ ಸಪೋರ್ಟ್ ಮಾಡಿದ್ದಾರೆ. ಪತ್ಯಕ್ಷ, ಪರೋಕ್ಷವಾಗಿ ಕೆಲಸ ಮಾಡದೇ ಹೋಗಿದ್ರೆ ಇಷ್ಟು ಮತ ನಮಗೆ ಬರುತ್ತಾ ಇರಲಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕನಕಪುರದಲ್ಲಿಂದು (Kanakapura) ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಚನ್ನಪಟ್ಟಣದಲ್ಲಿ ಯೋಗೇಶ್ವರ್ (CP Yogeshwar) ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದರು. ಪರೋಕ್ಷವಾಗಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್, ಬಿಜೆಪಿನವರೂ ಸಪೋರ್ಟ್ ಮಾಡಿದ್ದಾರೆ. ಅಶ್ವಥ್ ನಾರಾಯಣ್ ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಅಂದ್ರು, ಇದರ ಅರ್ಥ ಏನು? ಎಂದು ಪ್ರಶ್ನೆ ಮಾಡಿದರು.
ನಮ್ಮ ಮೇಲೆ ಈಗ ಕ್ಷೇತ್ರದ ಜನರ ಸಾಲ ಇದೆ, ಕ್ಷೇತ್ರದ ಜನ ನಮ್ಮ ಪರವಾಗಿ ಇದ್ದಾರೆ. ಈ ಗೆಲುವಿನ ಕ್ರೆಡಿಟ್ ಅಪೂರ್ವ ಸಹೋದರಿಗೆ ಸಲ್ಲಬೇಕಾಗಿಲ್ಲ, ನಮ್ಮೆಲ್ಲ ನಾಯಕರು, ಮತದಾರಿಗೆ ಸಲ್ಲಬೇಕು. ಕ್ಷೇತ್ರ ಖಾಲಿ ಆದಾಗಿನಿಂದ ಸಾಕಷ್ಟು ಪ್ರವಾಸ ಮಾಡಿದ್ವಿ. ಕ್ಷೇತ್ರದ ಜನರಿಗೆ ಏನು ಮಾತು ಕೊಟ್ಟಿದ್ವೊ ಅದನ್ನ ಮೊದಲು ಅನುಷ್ಠಾನ ಮಾಡಬೇಕು. ನಾನು ಯೋಗೇಶ್ವರ್, ಇಬ್ಬರೂ ಕೂತು ಚರ್ಚೆ ಮಾಡಿ ಇದಕ್ಕೆಲ್ಲ ಚಾಲನೆ ಕೊಡ್ತೇವೆ ಎಂದು ಆಶ್ವಾಸನೆ ನೀಡಿದರು.
ನಮಗೆ ಎಲ್ಲಾ ಪಾರ್ಟಿಯವರೂ ಸಹಾಯ ಮಾಡಿದ್ದಾರೆ. ಕಾಂಗ್ರೆಸ್ಗೆ ಇದ್ದಿದ್ದು ಕೇವಲ 16,000 ಮತಗಳು ಈಗ ಜಾಸ್ತಿ ಆಗಿದೆ. ಬಿಜೆಪಿ ಅವರೂ ಸಪೋರ್ಟ್ ಮಾಡಿದ್ದಾರೆ. ಬಿಜೆಪಿಯವ್ರು ನಮ್ಮ ಜೊತೆ ಬಂದು ನಿಂತುಕೊಳ್ಳದೇ ಹೋಗಿದ್ರೆ, ಪತ್ಯಕ್ಷವಾಗಿ ಪರೋಕ್ಷವಾಗಿ ಕೆಲಸ ಮಾಡದೇ ಹೋಗಿದ್ರೆ ಇಷ್ಟು ಮತ ನಮಗೆ ಬರುತ್ತಾ ಇರಲಿಲ್ಲ. ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ನುಡಿದರು.