ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಚುನಾವಣಾ ಮತದಾರರ ಪಟ್ಟಿಯಲ್ಲಿ ಲೋಪಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಇದನ್ನು ಸರಿಪಡಿಸಲು ಬೀದಿವಾರು, ಮನೆವಾರು ಮ್ಯಾಪಿಂಗ್ ಮಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಮತದಾರರನ್ನು ಬೇರೆ ಬೇರೆ ಮತಗಟ್ಟೆಗಳು ಹಾಗೂ ಬೇರೆ ವಾರ್ಡ್ಗಳಿಗೆ ವಿಂಗಡಿಸಲಾಗಿದೆ. ಮತದಾರರ ವಿಳಾಸದಲ್ಲಿ ಮನೆ ಸಂಖ್ಯೆ ತಪ್ಪಾಗಿರುವುದು, ರಸ್ತೆ ಸಂಖ್ಯೆ ತಪ್ಪಾಗಿ ನಮೂದಿಸಲಾಗಿದೆ. ಮತದಾರರ ಹೆಸರು ಎರಡು ಹಾಗೂ ಹೆಚ್ಚು ಬಾರಿ ಸೇರ್ಪಡೆ, ಮತ್ತೆ ಕೆಲವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇಷ್ಟೇ ಅಲ್ಲದೇ, ಕೆಲವು ಬೀದಿಗಳಲ್ಲಿ ಇರುವ ಮತದಾರರ ಹೆಸರುಗಳೇ ಪಟ್ಟಿಯಲ್ಲಿ ಕಣ್ಮರೆಯಾಗಿವೆ. ಮತ್ತೆ ಕೆಲವು ಮತದಾರರ ವಿಳಾಸ ಸರಿಯಾಗಿದ್ದರೂ, ಅವರನ್ನು ಬೇರೆ ವಾರ್ಡ್ಗಳಿಗೆ ಹಾಕಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಉಚಿತ ಯೋಜನೆಗಳು ದೇಶದ ದೀರ್ಘಕಾಲೀನ ಅಭಿವೃದ್ಧಿಗೆ ತೊಡಕು – ಸುಪ್ರೀಂ
ಈ ತಪ್ಪುಗಳು ಕಣ್ತಪ್ಪಿನಿಂದ ಆಗಿರುವಂತೆ ಕಾಣುತ್ತಿಲ್ಲ. ಉದ್ದೇಶಪೂರ್ವಕವಾಗಿ ಮತದಾರರು ಹಾಗೂ ಬಿಎಲ್ಒಗಳು, ರಾಜಕೀಯ ಪಕ್ಷಗಳಲ್ಲಿ ಗೊಂದಲ ಮೂಡಿಸಲು ವ್ಯವಸ್ಥಿತವಾಗಿ ನಡೆಸಿರುವಂತಿದೆ. ಇದರಿಂದ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಗೆ ಧಕ್ಕೆಯುಂಟು ಮಾಡಲಿದೆ. ಈ ಪ್ರಮಾದಗಳನ್ನು ಪಾರದರ್ಶಕವಾಗಿ ಹಾಗೂ ಶಾಶ್ವತವಾಗಿ ಸರಿಪಡಿಸಬೇಕಾಗಿದೆ. ಹೀಗಾಗಿ, ಬೀದಿವಾರು ಹಾಗೂ ಮನೆವಾರು ಮ್ಯಾಪಿಂಗ್ ಮಾಡುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಆಯೋಗಕ್ಕೆ ನಿರ್ದೇಶನ ನೀಡುತ್ತೇನೆ ಎಂದು ಆಗ್ರಹಿಸಿದ್ದಾರೆ.
ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿಗಳು, ಪ್ರತಿ ಬೀದಿಗಳಲ್ಲಿರುವ ಎಲ್ಲಾ ಮನೆಗಳು, ಪ್ರತಿ ಮನೆಯಲ್ಲಿರುವ ಎಲ್ಲಾ ಮತದಾರರನ್ನು ಮ್ಯಾಪಿಂಗ್ ಮಾಡಬೇಕು. ಇದರಿಂದ ಮತದಾರರ ಪಟ್ಟಿ ನಿಖರತೆ ಕಾಪಾಡಿ, ನಕಲಿ ಮತದಾರರನ್ನು ತೆಗೆಯಲು ಹಾಗೂ ಕೈಬಿಡಲಾಗಿರುವ ಮತದಾರರನ್ನು ಮತ್ತೆ ಸೇರಿಸಲು ನೆರವಾಗಲಿದೆ. ಅರ್ಹ ಮತದಾರರು ಮತದಾನದ ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗವು ವಿಶೇಷವಾಗಿ ಪರಿಷ್ಕರಣೆ ಅಭಿಯಾನ ನಡೆಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸದೆ ಪ್ರಿಯಾಂಕಾ ಗಾಂಧಿ ಜೊತೆ ಕಾಮಾಕ್ಯ ದೇಗುಲಕ್ಕೆ ಡಿಕೆಶಿ ಭೇಟಿ

