ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಗರಕ್ಕೆ ಬಂದಾಗ ನಾನು ಅವರಿಗೆ ನಮಿಸಿದ್ದೆ. ಆಗ ಅವರು ನನಗೆ ಅಮೂಲ್ಯವಾದ ಸಲಹೆ ನೀಡಿದರು ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ವೈರಲ್ ವಿಡಿಯೋ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ ಡಿಸಿಎಂ, ಪ್ರಧಾನಿಯವರು ನಗರಕ್ಕೆ ಬಂದಾಗ ನಾನು ಅವರಿಗೆ ನಮಿಸಿದ್ದೆ. ಆಗ ಪ್ರಧಾನಿಗಳು ತಲೆ ಬಗ್ಗಿಸುವಂಥದ್ದೇನೂ ಬೇಡ, ನೀವೆಲ್ಲ ಯಾವಾಗಲೂ ತಲೆ ಎತ್ತಿಟ್ಟುಕೊಳ್ಳಬೇಕು ಎಂದು ಅಮೂಲ್ಯ ಸಲಹೆ ಕೊಟ್ಟಿರುವುದಾಗಿ ತಿಳಿಸಿದರು.
ಈ ಮೂಲಕ ಪ್ರಧಾನಿಯವರು ಒಳ್ಳೆಯ ಮಾತನ್ನು ಹೇಳಿದ್ದಾರೆ. ಹೀಗಾಗಿ ಹಿರಿಯರಾದ ಪ್ರಧಾನಿಯವರ ಕಿವಿ ಮಾತು ಪಾಲಿಸುತ್ತೇನೆ. ಇದರಲ್ಲಿ ವೈರಲ್ ಆಗುವಂಥದ್ದು ಏನಿಲ್ಲ ಎಂದು ಸ್ಪಷ್ಟನೆ ನೀಡಿದರು.
ವೈರಲ್ ವಿಡಿಯೋದಲ್ಲೇನಿದೆ?
ಚಂದ್ರಯಾನ 2 ಲ್ಯಾಂಡಿಂಗ್ ವೀಕ್ಷಿಸಲೆಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದು ಇಸ್ರೋಗೆ ತೆರಳುವವರಿದ್ದರು. ಹೀಗಾಗಿ ಅವರನ್ನು ನಗರಕ್ಕೆ ಬರಮಾಡಿಕೊಳ್ಳಲು ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಅಶ್ವಥ್ ನಾರಾಯಣ ಮೊದಲಾದ ನಾಯಕರು ಬಂದಿದ್ದರು. ಮೋದಿಯವರು ಯಲಹಂಕ ವಾಯುನೆಲೆಗೆ ಬರುತ್ತಿದ್ದಂತೆಯೇ ಸಿಎಂ ಅವರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಹೀಗೆ ಸ್ವಾಗತಿಸುವ ವೇಳೆ ಅಶ್ವಥ್ ನಾರಾಯಣ ಅವರು ಪ್ರಧಾನಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದರು. ಈ ವೇಳೆ ಪ್ರಧಾನಿಯವರು ಕೆಲ ಹೊತ್ತು ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.