ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವಥ್ ನಾರಾಯಣ್ 51ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಡಾಲರ್ಸ್ ಕಾಲೋನಿಯ ಅಶ್ವಥ್ ನಗರ ನಿವಾಸದ ಮುಂದೆ ಇರುವ ಪಾರ್ಕಿನಲ್ಲಿ ಸಾರ್ವಜನಿಕರ ಮಧ್ಯೆ ಡಿಸಿಎಂ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಅಶ್ವಥ್ ನಾರಾಯಣ್ ಅವರ ಹುಟ್ಟುಹಬ್ಬದ ಬಗ್ಗೆ ತಿಳಿದು ಅಭಿಮಾನಿಗಳು, ಕಾರ್ಯಕರ್ತರು ಕೇಕ್ ತಂದು ಪಾರ್ಕಿನಲ್ಲಿ ಕಟ್ ಮಾಡಿಸಲು ನಿರ್ಧರಿಸಿದ್ದರು. ಆದ್ದರಿಂದ ಇಂದು ಬೆಳಗ್ಗೆ 7 ಗಂಟೆಗೆ ಪಾರ್ಕಿನಲ್ಲಿ ಡಿಸಿಎಂ ಕೈಯಲ್ಲಿ ಕೇಕ್ ಕಟ್ ಮಾಡಿಸಿ ಖುಷಿ ಪಟ್ಟಿದ್ದಾರೆ. ಜೊತೆಗೆ ಹುಟ್ಟು ಹಬ್ಬದ ನೆನಪಿಗಾಗಿ ಪಾರ್ಕ್ ಒಳಗಡೆ ಗಿಡ ನೆಟ್ಟು ಸಂಭ್ರಮಿಸಿದರು.
ಕೇಕ್ ಕಟ್ ಮಾಡಿದ ಬಳಿಕ ಮಾತನಾಡಿದ ಅವರು ಈ ವರ್ಷದ ಹುಟ್ಟು ಹಬ್ಬ ತುಂಬಾ ವಿಶೇಷ. ಡಿಸಿಎಂ ಆಗಿರೋ ಖುಷಿ ಇರುವುದು ಈ ವರ್ಷದ ಹುಟ್ಟುಹಬ್ಬಕ್ಕೆ ಕಳೆ ತಂದಿದೆ. ವಿವಿಧ ಪಾರ್ಕ್ಗಳಿಗೆ ಭೇಟಿ ಕೊಡುತ್ತಿದ್ದೇನೆ. ಅಭಿಮಾನಿಗಳು ಎಲ್ಲರೂ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಮಧ್ಯಾಹ್ನದವರೆಗೂ ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಂತರ ಬಿಜೆಪಿ ಕಛೇರಿಗೆ ಹೋಗುತ್ತೇನೆ. ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ಜನತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಮಯ ಕೊಡುತ್ತೇನೆ. ನನ್ನ ಹೆತ್ತವರು, ಅಭಿಮಾನಿಗಳು, ಕಾರ್ಯಕರ್ತರು ಇಲ್ಲಿವರೆಗೂ ನನ್ನ ಬೆಳೆಸಿದ್ದಾರೆ. ಅವರಿಗೋಸ್ಕರ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಖುಷಿಯನ್ನು ಹಂಚಿಕೊಂಡರು.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋಮವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು. ವಿಸ್ತರಣೆ ಆಗುತ್ತೋ? ಪುನರ್ ರಚನೆ ಆಗುತ್ತೋ? ಗೊತ್ತಿಲ್ಲ. ಎಲ್ಲಾ ಸಿಎಂ ಅವರೇ ತೀರ್ಮಾನ ತೆಗೆದುಕೊಂಡು ದಿನಾಂಕ ನಿಗದಿ ಮಾಡುತ್ತಾರೆ. ಕಾದು ನೋಡೋಣ ಏನೆಲ್ಲಾ ಆಗುತ್ತೆ ಎಂದರು.