ಮಂಡ್ಯ: ಬರೀ ಮೊಸಳೆ ಕಣ್ಣೀರು ಹಾಕಿ, ಋಣ ಇದೆ ಋಣ ಇದೆ ಎಂದು ಹೇಳುತ್ತಾರೆ. ಆದರೆ ಅವರು ಏನು ಋಣ ತೀರಿಸಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಮದ್ದೂರಿನ ಹೊನ್ನಲಗೆರೆಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಡಿಸಿ ತಮ್ಮಣ್ಣ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ 9 ತಿಂಗಳಿಗೆ ಮಂಡ್ಯ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಮಾಡಿದ್ದಾರೆ. ಜೊತೆಗೆ ಮಂಡ್ಯಕ್ಕೆ ಬಂದು ಶಂಕು ಸ್ಥಾಪನೆ ಕೂಡ ಮಾಡಿದ್ದಾರೆ. ಸ್ವತಂತ್ರ ಬಂದ 80 ವರ್ಷದಲ್ಲಿ ಯಾವ ಮುಖ್ಯಮಂತ್ರಿ ಒಂದು ಜಿಲ್ಲೆಗೆ ಸಾವಿರ ಕೋಟಿ ಅನುದಾನ ನೀಡಿದ್ದಾರೆ ತೋರಿಸಿ? ಅಂತಹವರನ್ನು ನೀವು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ರೈತರ ಬಗ್ಗೆ ಯಾರಿಗೆ ಮೇಲೆ ಕಾಳಜಿ ಇದೆ. ಯಾರಿಗೆ ಇಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಬರೀ ಮೊಸಳೆ ಕಣ್ಣೀರು ಹಾಕಿ, ಋಣ ಇದೆ ಋಣ ಇದೆ ಎಂದು ಹೇಳುತ್ತಾರೆ. ಆದರೆ ಅವರು ಏನು ಋಣ ತೀರಿಸಿದ್ದಾರೆ. ಈ 70 ವರ್ಷದಲ್ಲಿ ಬಂದ ಎಲ್ಲ ರಾಜಕಾರಣಿಗಳ ಮೇಲು ನಿಮ್ಮ ಋಣ ಇದೆ. ಆದರೆ ಋಣ ತೀರಿಸುವವರು ಎಷ್ಟು ಜನರು ಇದ್ದಾರೆ ಹೇಳಿ. ಅಂತಹವರಿಗೆಲ್ಲ ನೀವು ಉತ್ತರ ಕೊಡಬೇಕು ಎಂದು ಡಿಸಿ ತಮ್ಮಣ್ಣ ಸುಮಲತಾಗೆ ಟಾಂಗ್ ಕೊಟ್ಟಿದ್ದಾರೆ.