ದಾವಣಗೆರೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಾವಣಗೆರೆ ಮುಸ್ಲಿಂ ಮುಖಂಡರು ಅಜಾದ್ ನಗರ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದ್ದರು. ಅಲ್ಲದೆ ನಮಾಜ್ ಮಾಡಿ ಪ್ರತಿಭಟನೆ ಮಾಡಿದರು. ಆಗ ಪ್ರತಿಭಟನಾಕಾರರನ್ನು ಮನವೊಲಿಸುವ ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳು ರಾಷ್ಟ್ರಗೀತೆಯನ್ನು ಹಾಡಿ ಮುಸ್ಲಿಂ ಮುಖಂಡರನ್ನು ಮನವೊಲಿಸಿದ್ದಾರೆ.
ನಗರದ ಅಜಾದ್ ನಗರ ಪೊಲೀಸ್ ಠಾಣೆಗೆ ಮುಸ್ಲಿಂ ಸಂಘಟನೆ ಹಾಗೂ ಮುಖಂಡರು ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲು ಅನುಮತಿಯನ್ನು ಪಡೆಯಲು ಬಂದಿದ್ದರು. ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಇರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಪ್ರತಿಭಟನಾ ರ್ಯಾಲಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಪೊಲೀಸರು ಹೇಳಿದರು. ಇದನ್ನು ವಿರೋಧಿಸಿ ಠಾಣೆಯ ಮುಂಭಾಗ ನೂರಾರು ಮುಸ್ಲಿಂ ಬಾಂಧವರು ಆಗಮಿಸಿ ರ್ಯಾಲಿಗೆ ಅನುಮತಿ ನೀಡಬೇಕೆಂದು ಪಟ್ಟು ಹಿಡಿದರು. ಅಲ್ಲದೆ ಠಾಣೆಯ ಮುಂದೆಯೇ ನಮಾಜ್ ಮಾಡಲು ಮುಂದಾದರು. ಆಗ ಪೊಲೀಸರು ಅವರಿಗೆ ಚಾಪೆಗಳನ್ನು ನೀಡಿ ನಮಾಜ್ ಮಾಡಲು ಸಹಕರಿದರು. ಇದನ್ನೂ ಓದಿ: ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ರಾಷ್ಟ್ರಗೀತೆ ಹಾಡಿದ ಡಿಸಿಪಿ: ವಿಡಿಯೋ
ನಮಾಜ್ ಬಳಿಕ ಎಸ್.ಪಿ ಹನುಮಂತರಾಯ ಅವರು ಮುಸ್ಲಿಂ ಮುಖಂಡರನ್ನು ಮನವೊಲಿಸಲು ಪ್ರಯತ್ನಿಸಿದರು. ಜಿಲ್ಲಾಧಿಕಾರಿಗಳೇ ಇಲ್ಲಿಗೆ ಬಂದು ನಿಮ್ಮ ಮನವಿಯನ್ನು ಸ್ವೀಕರಿಸುತ್ತಾರೆ ಎಂದು ಸಮಾಧಾನ ಪಡಿಸಲು ಮುಂದಾದರು. ಅದನ್ನು ಕೇಳದ ಮುಸ್ಲಿಂ ಮುಖಂಡರು ಅನುಮತಿಗಾಗಿ ಪಟ್ಟು ಹಿಡಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರನ್ನು ಕೂಡ ಸುತ್ತುವರೆದರು.
ಆದ್ದರಿಂದ ಮುಸ್ಲಿಂ ಮುಖಂಡರ ಮನವಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿ ಅವರು ಸ್ವಿಕರಿಸಿದ್ದು, ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ರಾಷ್ಟ್ರಗೀತೆ ಹಾಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.