ಬೆಳಗಾವಿ: ಡೆಪ್ಯೂಟಿ ಸ್ಪೀಕರ್ (Deputy Speaker) ಆನಂದ ಮಾಮನಿ (Anand Mamani) ವಿಧಿವಶ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಮೂರು ದಿನಗಳ ನಡೆಯುವ ಐತಿಹಾಸಿಕ ಕಿತ್ತೂರು ಉತ್ಸವವನ್ನು (Kittur Utsav) ನಾಳೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ಬೆಳಗಾವಿ (Belagavi) ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಅ.23 ರಿಂದ 25ರವರೆಗೆ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಆಯೋಜನೆ ಮಾಡಲಾಗಿತ್ತು. ಆದರೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಇಂದು ನಡೆಯಬೇಕಿದ್ದ ಕಿತ್ತೂರು ಉತ್ಸವ ಹಾಗೂ ಇಂದಿನ ಕಾರ್ಯಕ್ರಮಗಳನ್ನು ನಾಳೆಗೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನ: ಆನಂದ ಮಾಮನಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿಯ ರಾಮಾಪುರ ಸೈಟ್ ಬಳಿಯ ತಾಲೂಕು ಕ್ರೀಡಾಂಗಣದಲ್ಲಿ ಕುಟುಂಬಸ್ಥರಿಗೆ ಹಾಗೂ ವಿಐಪಿಗಳಿಗೆ ಪ್ರತ್ಯೇಕ ಪೆಂಡಾಲ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯ ಆನಂದ ಮಾಮನಿ ಪಾರ್ಥಿವ ಶರೀರ ಸವದತ್ತಿ ತಲುಪಿದ್ದು, ರಾಮಾಪುರ ಸೈಟ್ನಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ಕುಟುಂಬಸ್ಥರಿಂದ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ ಅಂತಿಮ ದರ್ಶನ ಸ್ಥಳಕ್ಕೆ ಸ್ಥಳಾಂತರ ಮಾಡಿದರು. ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಂತಿಮ ದರ್ಶನದ ಬಳಿಕ ಸವದತ್ತಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಆನಂದ ಮಾಮನಿ ಚಂದ್ರಮಾ ಫಾರ್ಮಹೌಸ್ನಲ್ಲಿ ವೀರಶೈವ ಲಿಂಗಾಯತ ಧರ್ಮದ ವಿಧಿ-ವಿಧಾನದಂತೆ ಅಂತ್ಯಕ್ರಿಯೆ ನೆರವೇರಲಿದ್ದು, ತಾಲೂಕು ಕ್ರೀಡಾಂಗಣದತ್ತ ಆನಂದ ಮಾಮನಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ
ಶಾಸಕ ಆನಂದ ಮಾಮನಿ ಮೊದಲ ಪತ್ನಿ ರೇಖಾ, ಎರಡನೇ ಪತ್ನಿ ರತ್ನಾ ಸವದತ್ತಿ ಪಟ್ಟಣದ ಆನಂದ ಮಾಮನಿ ಅವರ ನಿವಾಸಕ್ಕೆ ಆಗಮಿಸಿದರು. ಬೆಂಗಳೂರಿನಿಂದ ಸವದತ್ತಿಯ ರಾಮಾಪುರ ಸೈಟ್ನಲ್ಲಿರುವ ನಿವಾಸಕ್ಕೆ ಆಗಮಿಸಿದ್ದು, ಕಣ್ಣೀರಿಡುತ್ತಾ ಇಬ್ಬರು ಪತ್ನಿಯರು ಮನೆಯೊಳಗೆ ತೆರಳಿದ್ದರು. ಇದೇ ವೇಳೆ ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಬೆಡಸೂರಮಠದ ಅಜ್ಜಯ್ಯ ಸ್ವಾಮೀಜಿ ಸಹ ಆಗಮಿಸಿದ್ದಾರೆ. ಇದನ್ನೂ ಓದಿ: ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ನಿಧನ