_ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ
ದಾವಣಗೆರೆ: ಅಡಳಿತದಲ್ಲಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ಹಿರೇಕಲ್ಮಠದಲ್ಲಿ ಮಾತನಾಡಿದ ಎಂಪಿ ರೇಣುಕಾಚಾರ್ಯ, ವಿಜಯೇಂದ್ರ ಒಬ್ಬ ಯುವ ಮುಖಂಡ. ಪಕ್ಷದ ಬೆಳವಣಿಗೆಗಾಗಿ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಾರೆ. ಆದರೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎನ್ನುವುದು ತಪ್ಪು. ಯಾವುದೇ ಇಲಾಖೆ ಅಥವಾ ಶಾಸಕರ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಇದೆಲ್ಲ ಕೆಲವರು ಹುಟ್ಟು ಹಾಕಿದ ಸುಳ್ಳು ಎಂದರು.
ಇದೇ ವೇಳೆ ಇತ್ತೀಚಿಗೆ ನಿರಂತರವಾಗಿ ಪಾಕ್ ಪರವಾಗಿ ಘೋಷಣೆ ಕೂಗುತ್ತಿದ್ದಾರೆ, ಹೀಗೆ ಕೂಗುತ್ತಿರುವವರ ಹಿಂದೆ ಯಾರು ಇದ್ದಾರೆ, ಯಾರ ಷ್ಯಡ್ಯಂತ್ರ ಇದೆ ಎಂದು ನಮ್ಮ ಸರ್ಕಾರ ತನಿಖೆ ಮಾಡುತ್ತದೆ. ಅಲ್ಲದೆ ನಿರ್ದಾಕ್ಷಿಣ್ಯವಾಗಿ ಇಂತವರ ಮೇಲೆ ಕ್ರಮ ಕೈಗೊಂಡು ನಡು ರಸ್ತೆಯಲ್ಲಿ ಗಲ್ಲಿಗೆ ಏರಿಸಬೇಕು ಇಲ್ಲ ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿಯ ಅನ್ನ, ನೀರು, ಗಾಳಿ ಕುಡಿದು ಪಾಕ್ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಇವರನ್ನು ನಮ್ಮಲ್ಲಿಯೇ ಯಾರೋ ರಕ್ಷಣೆ ಮಾಡುತ್ತಿದ್ದಾರೆ. ಹೀಗೆ ದೇಶ ವಿರೋಧಿ ಘೋಷಣೆ ಕೂಗಿದವರನ್ನು, ರಕ್ಷಣೆ ಮಾಡುತ್ತಿರುವವರನ್ನು ನಾವೇಲ್ಲ ಒಟ್ಟಾಗಿ ಖಂಡಿಸಬೇಕು ಆಗ ಮಾತ್ರ ಇಂತಹ ಹೇಳಿಕೆ ನೀಡುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಕಿಡಿಕಾರಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಹನ್ನೊಂದು ಶಾಸಕರು ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ವಿರುದ್ಧ ದೂರು ನೀಡಿದ್ದು ಸುಳ್ಳು. ಯಾರು ಕೂಡ ದೂರು ಕೊಟ್ಟಿಲ್ಲ. ಎಲ್ಲ ಶಾಸಕರು ಒಂದಾಗಿದ್ದೇವೆ. ಬಿಎಸ್ವೈ ನಮಗೆ ತಂದೆ ಇದ್ದ ಹಾಗೆ. ಇವೆಲ್ಲವೂ ಕೇವಲ ಮಾಧ್ಯಮಗಳ ಸೃಷ್ಟಿಯಾಗಿದೆ ಎಂದು ಮಾಧ್ಯಮಗಳ ಮೇಲೆ ಆರೋಪವನ್ನು ತಳ್ಳಿಹಾಕಿದರು.