ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದ ಹಿರೇಕಲ್ಮಠದ ಜಾತ್ರಾ ಮಹೋತ್ಸವದಲ್ಲಿ ಶಾಸಕ ರೇಣುಕಾಚಾರ್ಯ ಕೆಂಡ ಹಾರಿ ಭಕ್ತಿ ತೋರಿಸಿದ್ದಾರೆ.
ಹಿರೇಕಲ್ಮಠದ ಜಾತ್ರೋತ್ಸವವು ಶ್ರಾವಣ ಮಾಸದಲ್ಲಿ ಅದ್ಧೂರಿಯಾಗಿ ನಡೆಸಲಾಯಿತು. ಶ್ರೀಗಳಾದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ನಡೆಯಿತು.
ಈ ಸಂಭ್ರಮದಲ್ಲಿ ಡೊಳ್ಳು ಕುಣಿತ ಮಂಗಳವಾದ್ಯ ವೀರಗಾಸೆ ಕೀಲುಕುದುರೆ ಹಾಗೂ ಇನ್ನೂ ಹಲವಾರು ಮಂಗಳಕರ ವಾದ್ಯಗಳನ್ನು ತರಿಸಿ ಆನೆಯ ಮೆರವಣಿಗೆ ಸಹ ನಡೆಸಲಾಯಿತು. ಅಲ್ಲದೇ ಪೂಜ್ಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿಯವರ ಸನ್ನಿಧಿಯಲ್ಲಿ ನಡೆದ ಕೆಂಡಾರ್ಚನೆ ಸೇವೆಯಲ್ಲಿ ಪಾಲ್ಗೊಂಡು ಸ್ವತಃ ಶಾಸಕ ರೇಣುಕಾಚಾರ್ಯ ಅವರು ಕೆಂಡದ ಹೊಂಡವನ್ನು ಹಾಯ್ದರು. ಪ್ರತಿ ವರ್ಷ ನಡೆಯುವ ಜಾತ್ರೆಗೆ ತಪ್ಪದೇ ಭಾಗಿಯಾಗುವ ಶಾಸಕ ರೇಣುಕಾಚಾರ್ಯ ಶ್ರೀಗಳಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಅನ್ನಸಂತರ್ಪಣೆಯನ್ನು ನೆರವೇರಿಸುತ್ತಾರೆ.
ಹಿರೇಕಲ್ಮಠ ಶ್ರೀಗಳ ಜಾತ್ರಾಮಹೋತ್ಸವಕ್ಕೆ ಸಾವಿರಾರು ಭಕ್ತರು ಭಾಗಿಯಾಗಿ ರಥೋತ್ಸವವನ್ನು ನೆರವೇರಿಸಿ ನಂತರ ಹರಕೆ ಮಾಡಿಕೊಂಡ ಭಕ್ತರು ಕೆಂಡದ ಹೊಂಡವನ್ನು ಹಾದು ಹೋಗಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.