– ಆನಂದ್ ಸಿಂಗ್ಗೆ ನನ್ನ ಸಂಪೂರ್ಣ ಬೆಂಬಲವಿದೆ
ದಾವಣಗೆರೆ: ಕಾಂಗ್ರೆಸ್ಸಿನವರು ಎಂಟಿಆರ್ ರೆಡಿ ಫುಡ್ ಇದ್ದಂತೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಸಚಿವ ಆಶೋಕ್ ಪುತ್ರನ ಕಾರಿನ ಅಪಘಾತದ ಪ್ರಕರಣ ಶೀಘ್ರವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ಸಿಎಂ ಮನೆಗೆ ಮುತ್ತಿಗೆ ಹಾಗೂ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಎಂಟಿಆರ್ ರೆಡಿ ಫುಡ್ ಇದ್ದಂತೆ. ಪ್ರತಿಭಟನೆ ಮಾಡುವುದು ಅವರಿಗೆ ಗೊತ್ತಿಲ್ಲ ಎಂದು ಪ್ರತಿಪಕ್ಷಗಳ ಮೇಲೆ ಕಿಡಿಕಾರಿದರು.
ಈಗಿನ ಕೈ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷ ಎಂದುಕೊಂಡಿದ್ದಾರೆ. ಆ ಪಕ್ಷ ಬೇರೆ ಇದು ಬೇರೆ. ಇವರೆಲ್ಲ ಮೀಡಿಯಾದವರ ಮುಂದೆ ಬಾವುಟ ತೆಗೆಯುತ್ತಾರೆ. ಅವರು ಹೋದ ಮೇಲೆ ಮಡಚಿಕೊಂಡು ಇಟ್ಟಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ವ್ಯಂಗ್ಯವಾಡಿದರು.
ಇದೇ ವೇಳೆ ಶಾಸಕ ಉಮೇಶ್ ಕತ್ತಿಯವರು ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೋಗಲಿ ಬಿಡಿ ಕತ್ತಿಯವರು ನಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಹೋಗಿದ್ದಾರೆ. ಪಾಕಿಸ್ತಾನದವರನ್ನೋ, ಭಯೋತ್ಪಾದಕರನ್ನು ಭೇಟಿ ಮಾಡಲು ಹೋಗಿಲ್ಲ. ಹಿರಿಯ ನಾಯಕರಿದ್ದಾರೆ ಸಚಿವ ಸ್ಥಾನ ಕೇಳುವುದರಲ್ಲಿ ಏನ್ ತಪ್ಪಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರ ಸಾಕಷ್ಟು ಹಗರಣಗಳಿವೆ. ಆನಂದ್ ಸಿಂಗ್ ಕಾಂಗ್ರೆಸ್ ಸೇರಿಸಿಕೊಂಡಾಗ ಅವರ ಮೇಲೆ ಆರೋಪ ಇರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಎಸಿಬಿ ರಚನೆ ಮಾಡಿ ನಿಮ್ಮ ಕೇಸ್ ಗಳನ್ನು ಕ್ಲೀನ್ ಚಿಟ್ ಮಾಡಿಕೊಂಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ನವರು ಸತ್ಯಹರಿಶ್ಚಂದ್ರರಾ? ಕಾಂಗ್ರೆಸ್ ಬಿಟ್ಟು ಬಿಜೆಪಿಯಿಂದ ಸಚಿವರಾಗಿದ್ದಕ್ಕೆ ಅಸೂಯೆಯಿಂದ ಈ ರೀತಿ ಹೇಳುತ್ತಿದ್ದಾರೆ. ಆನಂದ್ ಸಿಂಗ್ ಅರಣ್ಯ ಸಚಿವರಾಗಿ ಮುಂದುವರಿಯಲಿ, ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದರು.