ದಾವಣೆಗೆರೆ: ಚಂದ್ರಗ್ರಹಣದ ಹಿನ್ನೆಲೆ ದೇಶಾದ್ಯಂತ ಕೆಲ ದೇವಾಲಯಗಳಲ್ಲಿ ಪೂಜೆ ಹೋಮ ಹವನ ಮಾಡಿ ಗ್ರಹಣ ದೋಷವನ್ನು ನಿವಾರಣೆ ಮಾಡಿಕೊಳ್ಳಲು ಪೂಜೆ ಮಾಡಿರುತ್ತಾರೆ. ಆದರೆ ದಾವಣಗೆರೆಯ ಮುರುಘಾ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಗ್ರಹಣದ ವೇಳೆಯೇ ಭಕ್ತರೊಂದಿಗೆ ಪ್ರಸಾದ ಸ್ವೀಕರಿಸಿದರು.
ಜಯದೇವ ವೃತ್ತದ ಬಳಿ ಇರುವ ಶಿವಯೋಗಿ ಮಂದಿರದಲ್ಲಿ ಪ್ರಸಾದ ಸ್ವೀಕರಿಸಿದ ಡಾ.ಶಿವಮೂರ್ತಿ ಮುರಘಾ ಶರಣರು, ಗ್ರಹಣದ ಬಗ್ಗೆ ವೈಜ್ಞಾನಿಕ ತಿಳುವಳಿಕೆ ನೀಡಿದರು. ಗ್ರಹಣ ಆರಂಭ ಆಗುತ್ತಿದ್ದಂತೆ ಇಷ್ಟಲಿಂಗಪೂಜೆ ಮಾಡಿ ಪ್ರಸಾದ ಸ್ವೀಕರಿಸಿ ಭಕ್ತರಿಗೂ ಕೂಡ ಪ್ರಸಾದ ಸ್ವೀಕರಿಸಲು ಹೇಳಿ ಬೆಳದಿಂಗಳ ಬೆಳಕಿನಲ್ಲಿ ಪ್ರಸಾದ ಸ್ವೀಕರಿಸಿದರು.
ಸೂರ್ಯ ಹಾಗೂ ಚಂದ್ರಗ್ರಹಣಗಳು ಒಂದು ವಿಸ್ಮಯಗಳು ಅವುಗಳನ್ನು ನೋಡಿ ಖುಷಿ ಪಡಬೇಕು. ಅದನ್ನು ಬಿಟ್ಟು ಗ್ರಹಣದ ಸಮಯದಲ್ಲಿ ಮೂಡ ನಂಬಿಕೆಗಳನ್ನು ನಂಬಿ ಅವುಗಳನ್ನು ವೀಕ್ಷಿಸಲು ಜನರು ತಪ್ಪಿಸಿಕೊಳ್ಳುತ್ತಿದ್ದಾರೆ. ಸೂರ್ಯ ಗ್ರಹಣ ಇದ್ದಾಗ ಮನೆಯಲ್ಲಿನ ನೀರನ್ನು ಖಾಲಿ ಮಾಡುತ್ತಾರೆ. ಆದರೆ ಅದೇ ನೀರು ಸಾಗರೋಪಾದಿಯಲ್ಲಿ ಇರುತ್ತೆ ಅದನ್ನು ಚಲ್ಲುವುದಕ್ಕೆ ಆಗುತ್ತಾ. ಗ್ರಹಣ ಸಂದರ್ಭದಲ್ಲಿ ಯಾವ ದೇವರು ಕೂಡ ಮಲಿನವಾಗುವುದಿಲ್ಲ. ಆದರೆ ನಮ್ಮ ಜನ ಮೂಡ ನಂಬಿಕೆಯಿಂದ ದೇವಸ್ಥಾನವನ್ನು ನೀರಿನಿಂದ ಶುದ್ಧಿ ಮಾಡುತ್ತಾರೆ. ಜೀವನದಲ್ಲಿ ಇಂತಹುಗಳ ಬಗ್ಗೆ ನಂಬಿಕೆ ಇರಲಿ, ಆದರೆ ಅಂಧಾನುಕರಣೆ ಇರಬಾರದು ಎಂದು ಡಾ.ಶಿವಮೂರ್ತಿ ಮುರಘಾ ಶರಣರು ಭಕ್ತರಿಗೆ ತಿಳಿಸಿದರು.
ಈ ವೇಳೆ ಸ್ವಾಮೀಜಿ ಜೊತೆ ಭೋವಿ ಗುರುಪೀಠ ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಸಿರಸಿ ಮಲ್ಲಿಕಾರ್ಜುನ ಸ್ವಾಮೀಜಿ, ದಾವಣಗೆರೆಯ ಬಸವಪ್ರಭು ಸ್ವಾಮೀಜಿ ಹಾಗೂ ಭಕ್ತರು ಸೇರಿ ಪ್ರಸಾದ ಸ್ವೀಕಾರಿಸಿದರು.