ದಾವಣಗೆರೆ: ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಿ ಒಂದು ದಿನ ಕಳೆದಿಲ್ಲ ಆಗಲೇ ಬಿಜೆಪಿಯಲ್ಲಿ ಸಚಿನ ಸ್ಥಾನಕ್ಕೆ ಸಮುದಾಯಗಳಿಂದ ಒತ್ತಡ ಶುರುವಾಗಿದೆ.
ಯಾದವ ಸಮಾಜಕ್ಕೆ ಒಂದು ಸಚಿವ ಸ್ಥಾನ ನೀಡಬೇಕು ಎಂದು ದಾವಣಗೆರೆಯಲ್ಲಿ ಜಿಲ್ಲಾ ಯಾದವ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ನಾಳೆ ಅಥವಾ ನಾಡಿದ್ದು ಬಿಎಸ್ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ವೇಳೆ ಸಚಿವ ಸಂಪುಟದಲ್ಲಿ ಯಾದವ ಸಮಾಜಕ್ಕೆ ಒಂದು ಸಚಿವ ಸ್ಥಾನ ನೀಡಬೇಕು ಎಂದು ಯಾದವ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ ಒತ್ತಾಯಿಸಿದರು.
ಚಿತ್ರದುರ್ಗದ ಹಿರಿಯೂರು ಕ್ಷೇತ್ರದ ಪೂರ್ಣಿಮಾ ಶ್ರೀನಿವಾಸ್ ಯಾದವ ಸಮಾಜದಿಂದ ಒಬ್ಬರೇ ಗೆಲುವು ಸಾಧಿಸಿದ್ದು ಅವರಿಗೆ ಮಹಿಳಾ ಕೋಟದಲ್ಲಿ ಸಚಿವ ಸ್ಥಾನ ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ ಉತ್ತಮವಾದ ಕೆಲಸ ಮಾಡಿ ಐದಾರು ಸಂಸದರನ್ನು ಗೆಲುವು ಸಾಧಿಸಲು ಸಾಕಷ್ಟು ಕಷ್ಟ ಪಟ್ಟಿದ್ದು, ಕೂಡಲೇ ಕೇಂದ್ರ ಬಿಜೆಪಿ ವರಿಷ್ಠರು ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.