ದಾವಣಗೆರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆತ್ತ ಮಗಳಿಗೆ ವಿಷವಿಕ್ಕಿ ತಂದೆ ನೇಣಿಗೆ ಶರಣಾದ ಘಟನೆ ದಾವಣಗೆರೆಯ ನಿಟುವಳ್ಳಿಯಲ್ಲಿ ನಡೆದಿದೆ.
ಜಯಂತ್ (30) ಮಾನಸ (3) ಸಾವನ್ನಪ್ಪಿದ ದುರ್ದೈವಿಗಳಾಗಿದ್ದು, ನೇಣು ಬಿಗಿದುಕೊಂಡ ಜಯಂತ್ ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕೈದು ದಿನಗಳಿಂದ ದಂಪತಿ ಜಗಳವಾಡುತ್ತಿದ್ದು, ಎರಡು ದಿನಗಳ ಹಿಂದೆ ಜಯಂತ್ ಪತ್ನಿ ತವರು ಮನೆಗೆ ಹೋಗಿ ಬಂದಿದ್ದಳು ಎನ್ನಲಾಗಿದೆ. ಇಂದು ಪತ್ನಿ ಶಾಲೆಗೆ ಹೋಗಿದ್ದಾಗ ಜಯಂತ್ ಮಗಳಿಗೆ ವಿಷ ಕುಡಿಸಿ ಮಂಚದ ಮೇಲೆ ಮಲಗಿಸಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ಜಯಂತ್ನ ಪತ್ನಿ ಶವಗಳನ್ನು ನೋಡಿ ಕುಸಿದು ಬಿದ್ದಿದ್ದಾಳೆ. ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಲೋಕವನ್ನೇ ನೋಡದ ಪುಟ್ಟ ಕಂದಮ್ಮ ಕಣ್ಣು ಮುಚ್ಚಿದ್ದು ಅಲ್ಲಿ ನೆರೆದವರ ಕಣ್ಣಿನಲ್ಲಿ ನೀರು ತರಿಸಿದೆ.