ದಾವಣಗೆರೆ: ಏಕವಚನದಲ್ಲಿ ಸಂಸದ ಸಿದ್ದೇಶ್ವರ್ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ಬೈದಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಡೆದಿದೆ.
ಇಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ಕೋವಿಡ್-19 ಸೋಂಕಿನ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಯುತ್ತಿತ್ತು.
ಈ ಸಂದರ್ಭದಲ್ಲಿ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾತನಾಡಿ ಕೊರೊನಾ ಸಂದರ್ಭದಲ್ಲಿ ಜನರ ಬಳಿ ಹಣ ಇರುವುದಿಲ್ಲ. ಆದ್ದರಿಂದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಐದು ರೂಪಾಯಿ ಪಡೆಯುವ ಬದಲು ಉಚಿತವಾಗಿ ಇಲ್ಲವೆ ಎರಡು ರೂಪಾಯಿಗೆ ನೀಡಿ ಎಂದು ಸಲಹೆ ನೀಡುತ್ತಿದ್ದರು. ಶಾಸಕರ ಮಾತುನಾಡುತ್ತಿರುವಾಗಲೇ ಬಿಜೆಪಿ ಸಂಸದ ಜಿ ಎಂ ಸಿದ್ದೇಶ್ವರ್ ಮಧ್ಯೆ ಮಾತನಾಡಿ ಎಲ್ಲವನ್ನು ಪುಕ್ಕಟೆಯಾಗಿ ಕೊಡುವುದಕ್ಕೆ ಆಗುವುದಿಲ್ಲ ಎಂದರು.
ಈ ವೇಳೆ ವಿರುಪಾಕ್ಷಪ್ಪ ಸಮ್ಮನೆ ಕೊತ್ಕೋಳಯ್ಯ ಎಂದು ಜಿ ಎಂ ಸಿದ್ದೇಶ್ವರ್ ಅವರಿಗೆ ಏಕವಚನದಲ್ಲಿ ಮಾತನಾಡಿದರು. ಈ ಸಮಯದಲ್ಲಿ ಕುರ್ಚಿಯಿಂದ ಎದ್ದು ಬಂದ ಜಿ ಎಂ ಸಿದ್ದೇಶ್ವರ್ ಏನೋ ನಿಂದು ಎಂದು ಏಕವಚದಲ್ಲಿಯೇ ಕಿತ್ತಾಡಿಕೊಂಡರು. ಈ ವೇಳೆ ಎಸ್ಪಿ ಹನುಮಂತರಾಯ ಮಧ್ಯ ಪ್ರವೇಶಿಸಿ ಗಲಾಟೆಗೆ ಬ್ರೇಕ್ ಹಾಕಿದ್ದು, ಸಂಸದ ಹಾಗೂ ಶಾಸಕರ ವರ್ತನೆಯಿಂದ ಮುಖಪ್ರೇಕ್ಷರಾದ ಸಚಿವರು ನೋಡುತ್ತಾ ಕುಳಿತ್ತಿದ್ದರು.
ಅಲ್ಲದೆ ಸಭೆ ಮುಗಿದ ಬಳಿಕ ಹೊರ ಬರುವಾಗಲು ಕೂಡ ಇಬ್ಬರು ಜಗಳವಾಡಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗವೇ ಒಬ್ಬರಿಗೊಬ್ಬರು ಸವಾಲ್ ಹಾಕುತ್ತ ನಿಂದಿಸಿಕೊಂಡಿದ್ದಾರೆ. ಆಗ ಶಾಸಕರಾದ ಎಂಪಿ ರೇಣುಕಾಚಾರ್ಯ, ಎಸ್ವಿ ರಾಮಚಂದ್ರಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇಬ್ಬರನ್ನು ಸಮಾಧಾನ ಪಡಿಸಿ ಕರೆದೊಯ್ದರು.