ದಾವಣಗೆರೆ: ದೇಶಾದ್ಯಂತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗಳು, ಗಲಭೆಗಳು ನಡೆಯುತ್ತಿವೆ. ಇತ್ತ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಪೌರತ್ವ ತಿದ್ದುಪಡೆ ಮಸೂದೆಯನ್ನು ಅಭಿನಂದಿಸಿ ಶ್ರೀರಾಮಸೇನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶ್ರೀರಾಮಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು, ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಪೌರತ್ವ ಮಸೂದೆ ಜಾರಿಗೊಳಿಸಿದರೆ ಶ್ರೀರಾಮ ಸೇನೆ ಹೃತೂರ್ವಕ ಅಭಿನಂದನೆ ಸಲ್ಲಿಸುತ್ತಿದೆ ಎಂದರು.
70 ವರ್ಷಗಳಿಂದ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದವರ ನೋವಿಗೆ ಸ್ಪಂದಿಸಿ ಭಾರತೀಯ ಪೌರತ್ವ ನೀಡಿ ಅವರನ್ನು ಮನುಷ್ಯರಂತೆ ಬದುಕಲು, ಜೀವನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ್ದು ಮಾನವೀಯತೆ, ಬಂಧುತ್ವ, ಸಂಸ್ಕೃತಿಯ ಅನಾವರಣವಾಗಿದೆ. ಇಂತಹ ದಿಟ್ಟ ನಿರ್ಧಾರಕ್ಕೆ ಮತ್ತೊಮ್ಮೆ ಅಭಿನಂದನೆಗಳು. ಈ ಮಸೂದೆ ವಿರೋಧಿಸುವ ಭರದಲ್ಲಿ ಕೆಲವು ಮತಾಂಧರು, ರಾಜಕೀಯ ಪಕ್ಷಗಳು ಸ್ವಾರ್ಥ ಪ್ರೇರಕ ಶಕ್ತಿಗಳು ದೇಶದಲ್ಲಿ ಅಶಾಂತಿ, ಗಲಭೆ ಸಾರ್ವಜನಿಕ ಆಸ್ತಿ ಹಾನಿ ಪೊಲೀಸ್, ಸೈನಿಕರ ಮೇಲೆ ದಾಳಿ ಶಾಲಾ ಮಕ್ಕಳ ಮೇಲೆ ದಾಳಿ ಮುಂತಾದ ರೀತಿಯಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ್ರೋಹಿಗಳು ಗಲಭೆ ಸೃಷ್ಠಿಸಿದ್ದು ತಕ್ಷಣ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಈ ದೇಶದ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕು ಎಂದು ಮನವಿ ನೀಡಿದರು.